ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯಿಸಿಕೊಂಡು ಮಹಿಳೆಯರಿಗೆ ವಂಚನೆ ಮಾಡುತ್ತಿದ್ದ ಕಳ್ಳನೊಬ್ಬನನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ನಿವಾಸಿ ರೋಹಿತ್ ಮಥಾಯೀಸ್ ಬಂಧಿತ ಆರೋಪಿಯಾಗಿದ್ದು, ಸುಂದರ ಮಹಿಳೆಯರನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡು ಬಳಿಕ ಅವರ ಮನೆಯಿಂದ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಎನ್ನಲಾಗಿದೆ.
2019 ರಲ್ಲಿ ನಿವೃತ್ತ ಪಿಡಿಓ ಭರತಲಕ್ಷ್ಮಿ ಎಂಬವರನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿದ್ದ ಆರೋಪಿಯಾಗಿರುವ ರೋಹಿತ್ ಮಥಾಯೀಸ್
ವಿಚಾರಣೆಗೆ ಹಾಜರಾಗದೇ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದನು.
ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರನ್ನು ಪರಿಚಯಿಸಿಕೊಂಡು ನಂತರ ಅವರನ್ನು ಭೇಟಿಯಾಗಲು ಹೋಗಿ ಚಿನ್ನ ಕಳ್ಳತನ ಮಾಡುತ್ತಿದ್ದ ಬಂಧಿತ ಆರೋಪಿ, 2021 ರಲ್ಲಿ ಮಂಗಳೂರಿನ ಕಂಕನಾಡಿಯ ಮಹಿಳೆಯೊಬ್ಬರ ಮನೆಯಿಂದ ಕಳ್ಳತನ ಮಾಡಿ ಪರಾರಿಯಾಗಿದ್ದ ಎಂದು ಹೇಳಲಾಗಿದೆ.
ಬಂಧನದ ವೇಳೆ ಆರೋಪಿ ರೋಹಿತ್ ಮಥಾಯೀಸ್ ಬಳಿಯಿಂದ ಏಳು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.