ಕಾಣಿಯೂರು; ತೋಟಕ್ಕೆ ನೀರು ಬಿಡಲು ಹೋದ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಕಾಣಿಯೂರಿನಲ್ಲಿ ನಡಿದಿದೆ. ಕಡಬ ತಾಲೂಕಿನ ಕಾಣಿಯೂರು ಗ್ರಾಮದ ನಿವಾಸಿ ಮಾಧವ ಕೆ. (50) ಮೃತರು.
ಮಾಧವ ಅವರು ಏಪ್ರಿಲ್ 29 ರಂದು ಬೆಳಿಗ್ಗೆ ಸುಮಾರು 8:30 ಗಂಟೆಗೆ ತಮ್ಮ ಮನೆಯ ಸಮೀಪವಿರುವ ಅಡಿಕೆ ತೋಟಕ್ಕೆ ನೀರು ಹಾಯಿಸಲು ತೆರಳಿದ್ದರು. ಸುಮಾರು 9:00 ಗಂಟೆಯ ವೇಳೆಗೆ ಮಾಧವ ಅವರ ಮೊಬೈಲ್ ಫೋನ್ಗೆ ಕರೆ ಬಂದಿದ್ದು, ಫೋನ್ ನೀಡಲೆಂದು ಅವರ ಪುತ್ರಿ ತೋಟಕ್ಕೆ ಹೋಗಿದ್ದಾರೆ. ಈ ವೇಳೆ ತಂದೆಯು ತೋಟದಲ್ಲಿ ಕುಸಿದು ಬಿದ್ದಿರುವುದನ್ನು ಕಂಡು ಆಕೆ ಕಿರುಚಿಕೊಂಡಿದ್ದಾರೆ. ಮಗಳ ಬೊಬ್ಬೆ ಕೇಳಿ ಮನೆಯಲ್ಲಿದ್ದ ಪತ್ನಿ, ಪುತ್ರ ಅಹಿಜಿತ್ ಕೆ.ಎಂ. ಹಾಗೂ ಸಂಬಂಧಿಕರು ತೋಟಕ್ಕೆ ಓಡಿ ಬಂದಿದ್ದಾರೆ.
ತಕ್ಷಣವೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಾಧವ ಅವರನ್ನು ಆಂಬ್ಯುಲೆನ್ಸ್ ಮೂಲಕ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಬೆಳಿಗ್ಗೆ 10:00 ಗಂಟೆಯ ವೇಳೆಗೆ ಪರೀಕ್ಷಿಸಿದ ವೈದ್ಯರು, ಮಾಧವ ಅವರು ಅದಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮೃತರ ಪುತ್ರ ಅಹಿಜಿತ್ ಕೆ.ಎಂ. ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


