ಕನಕಮಜಲು: ಸುಳ್ಯ ತಾಲೂಕಿನ ಕನಕಮಜಲು ಗ್ರಾಮ ಪಂಚಾಯತ್ ನ ಕೋವಿಡ್-19 ಕೊರೊನಾ ಜಾಗೃತ ಕಾರ್ಯಪಡೆಯ ವಿಶೇಷ ಸಭೆಯು ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಜಯಲತ ಗಬ್ಬಲಡ್ಕ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಇಂದು ಜರುಗಿತು.
ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಅಂಗಡಿಗಳನ್ನು ಮೇ.12ರಿಂದ ಸರಕಾರದ ಮುಂದಿನ ಆದೇಶದವರೆಗೆ ಬೆಳಿಗ್ಗೆ 7ರಿಂದ ಅಪರಾಹ್ನ 2 ಗಂಟೆಯವರೆಗೆ ತೆರೆಯುವಂತೆ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಬಳಿಕ ಎಲ್ಲಾ ವರ್ತಕರಿಗೆ, ಅಂಗಡಿ ಮಾಲಕರಿಗೆ ಹಾಗೂ ಸಾರ್ವಜನಿಕರಿಗೆ ಸೂಚಿಸಲಾಯಿತು.
ಸಭೆಯಲ್ಲಿ ತೆಗೆದುಕೊಂಡಿರುವ ಪ್ರಮುಖ ತೀರ್ಮಾನಗಳು
- ವರ್ತಕರು ಹಾಗೂ ಅಂಗಡಿ ಮಾಲಕರುಗಳು ವ್ಯಾಪಾರದ ಸಂದರ್ಭದಲ್ಲಿ ಅಲ್ಲದೇ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಹಾಗೂ ಗ್ರಾಹಕರಲ್ಲಿ ಮಾಸ್ಕ್ ಧರಿಸಿ ವ್ಯಾಪಾರಕ್ಕೆ ಬರುವಂತೆ ಹೇಳುವುದು, ಇಲ್ಲವಾದಲ್ಲಿ ರೂ. 100 ದಂಡವನ್ನು ಪಾವತಿ ಮಾಡಬೇಕಾಗುತ್ತದೆ.
- ಅಂಗಡಿ ಮಾಲಕರು ತಮ್ಮ ಅಂಗಡಿಗಳ ಮುಂದೆ ಗ್ರಾಹಕರನ್ನು ಸಾಮಾಜಿಕ ಅಂತರ ಪಾಲಿಸುವಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಮೊದಲನೆ ಬಾರಿ 100 ರೂ. ದಂಡ ವಿಧಿಸಲಾಗುತ್ತದೆ. ಮತ್ತೂ ಮಾಸ್ಕ್ ಹಾಕದೆ ಇದ್ದರೆ ಗರಿಷ್ಠ 1000 ರೂ. ವರೆಗೆ ದಂಡ ವಿಧಿಸಲಾಗುತ್ತದೆ.
- ಸರಕಾರದಿಂದ ಮುಂದಿನ ಆದೇಶ ಬರುವವರೆಗೆ ಅಪರಾಹ್ನ 2 ಗಂಟೆಯ ಬಳಿಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಯಾವುದೇ ಅಂಗಡಿ-ಮುಂಗಟ್ಟುಗಳನ್ನು ತೆರೆಯುವಂತಿಲ್ಲ. ಹಾಗೂ ಯಾವುದೇ ವ್ಯಾಪಾರ ನಡೆಸುವಂತಿಲ್ಲ. ನಿಯಮ ಮೀರಿ ಅಂಗಡಿ ತೆರೆದಿರುವುದು ಕಂಡುಬಂದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.
- ಎಲ್ಲಾ ಅಂಗಡಿ ವ್ಯಾಪಾರಸ್ಥರು ಸಾಮಾಗ್ರಿಗಳ ನಿಗದಿತ ದರ ಕ್ಕಿಂತ ಅಧಿಕ ದರದಲ್ಲಿ ಮಾರಾಟ ಮಾಡುವುದು ಕಂಡುಬಂದಲ್ಲಿ ಅವರ ವ್ಯಾಪಾರ ಪರವಾನಿಗೆಯನ್ನು ಮುಟ್ಟುಗೋಲು ಮಾಡಿ ದಂಡ ವಿಧಿಸಲಾಗುವುದು.
ವ್ಯಾಪಾರ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರು ಅಗತ್ಯ ಸಾಮಾಗ್ರಿಗಳನ್ನು ಪಡೆದುಕೊಂಡು ಕೂಡಲೇ ತೆರಳತಕ್ಕದ್ದು, ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗುಂಪುಗೂಡಿರುವುದು ಕಂಡುಬಂದಲ್ಲಿ ದಂಡ ವಸೂಲಿ ಮಾಡಲಾಗುವುದು.
ಹೊರ ರಾಜ್ಯ ಅಥವಾ ಹೊರ ಜಿಲ್ಲೆಗಳಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಂತಹ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಗ್ರಾ.ಪಂ. ಕೊರೊನಾ ಕಾರ್ಯಪಡೆಯ ಜಾಗೃತ ಸಮಿತಿಗೆ ತಿಳಿಸುವಂತೆ ಗ್ರಾಮಸ್ಥರಿಗೆ ಸೂಚಿಸಲಾಗಿದೆ.
ಈ ಬಗ್ಗೆ ಸಾರ್ವಜನಿಕ ನೋಟಿಸು ಮಾಡಿ ಗ್ರಾಮದ ಎಲ್ಲಾ ಅಂಗಡಿಗಳ ಮಾಲಕರಿಗೆ, ವರ್ತಕರಿಗೆ ನೀಡಲಾಗಿದೆ.
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರೋಜಿನಿ, ಉಪಾಧ್ಯಕ್ಷ ಶ್ರೀಧರ ಕುತ್ಯಾಳ , ಗ್ರಾ.ಪಂ. ಸದಸ್ಯರುಗಳು ಹಾಗೂ ಸಿಬ್ಬಂದಿಗಳು ಎಲ್ಲಾ ಅಂಗಡಿಗಳಿಗೆ ಭೇಟಿ ಮಾಡಿ ಪಾಲಿಸಬೇಕಾದ ನಿಯಮಗಳನ್ನು ಸೂಚಿಸಿದರು.