ಮಂಗಳೂರು: ಆರ್ ಎಸ್ ಎಸ್ ಸಂಘಟನೆ ನಪುಂಸಕ ಎಂಬ ಕಾಂಗ್ರೆಸ್ ಹೇಳಿಕೆ ವಿರುದ್ದ ಆರ್ ಎಸ್ ಎಸ್ ಮುಖಂಡ ಕಲ್ಕಡ್ಕ ಪ್ರಭಾಕರ ಭಟ್ ಕಿಡಿ ಕಾರಿದ್ದಾರೆ.
ಕಳೆದ 97 ವರ್ಷಗಳಿಂದ ದೇಶಕ್ಕೋಸ್ಕರ ಬದುಕುತ್ತಿರುವ ಏಕೈಕ ಸಂಘಟನೆ ಆರ್ ಎಸ್ ಎಸ್.ನ ದೇಶದ್ರೋಹಿ, ನಪುಂಸಕ ಅಂತ ಹೇಳೋಕೆ ಅರ್ಥ ಬೇಕಲ್ಲ. ನಾಲಿಗೆ ಇದೆ ಅಂತ ಒಟ್ಟಾರೆ ಹೇಳಿಕೊಂಡು ಹೋದ್ರೆ ಆಗುತ್ತಾ? ದೇಶದ ಕೆಲಸ ಮಾಡುತ್ತ ದಿನನಿತ್ಯ ಭಾರತ್ ಮಾತಾ ಕೀ ಜೈ ಹೇಳೋದು ನಾವು ಮಾತ್ರ. ಇವರೆಲ್ಲಾ ಈಗ ಎಲ್ಲಿ ಭಾರತ್ ಮಾತಾ ಕೀ ಜೈ ಹೇಳ್ತಾರೆ? ಇಟಲಿಯಿಂದ ಬಂದವರಿಗೋ ಅಥವಾ ಇನ್ಯಾರಿಗೋ ಜೈ ಹೇಳ್ತಾರೆ, ಭಾರತ್ ಮಾತಾ ಕೀ ಜೈ ಹೇಳೋದು ನಾವು ಮಾತ್ರ.
ದೇಶ ವಿಭಜನೆ ಮಾಡಿದ್ದು ಆರ್ ಎಸ್ ಎಸ್, ವಿಎಚ್ ಪಿ ಅಲ್ಲ. ಇದೇ ನೆಹರೂ, ಗಾಂಧೀಜಿ ಒಪ್ಪಿಗೆ ಕೊಟ್ಟು ದೇಶ ವಿಭಜನೆ ಆಗಿದ್ದು. ದೇಶ ವಿಭಜನೆ ಇವತ್ತು ನಮಗೆ ನಿತ್ಯ ಆತಂಕ ತಂದಿಟ್ಟಿದೆ. ಹೊರಗಿನಿಂದ ಆಕ್ರಮಣ, ಒಳಗೆ ಪಾಕಿಸ್ತಾನ್ ಜಿಂದಾಬಾದ್. ಇದಕ್ಕೆ ಕಾರಣ ಕಾಂಗ್ರೆಸ್ ಅನ್ನೋದನ್ನ ಅವರು ಒಪ್ಪಲಿ. ಚೀನಾ ಆಕ್ರಮಣ ಮಾಡಿದಾಗ ನೆಹರೂ ಮಾತನಾಡಲಿಲ್ಲ, ಆಗ ಸಂಘದ ಹಿರಿಯರಾದ ಗುರೂಜಿ ಅವರಿಗೆ ಎಚ್ಚರಿಕೆ ಕೊಟ್ಟರು. ಹೆಡ್ಗೆವಾರ್ ಇವರಿಗೆ ಸಮಸ್ಯೆ ಆಗಿದೆ, ಅದು ದೊಡ್ಡ ವಿಷಯ ಆಗಿದೆ.
ಒಂದು ಕಡೆ ನಾವು ಗಲಾಟೆ ಮಾಡ್ತೀವಿ ಅಂತಾರೆ, ಮತ್ತೊಂದೆಡೆ ನಪುಂಸಕ ಅಂತಾರೆ. ಇಟಲಿಯ ಹೆಂಗಸಿನ ಪಾದಪೂಜೆ ಮಾಡಿ ಅದರ ನೀರನ್ನ ತೀರ್ಥ ಅಂತ ಕುಡಿತಾರಲ್ಲ. ಅಂಥದ್ದನ್ನ ಪೂಜೆ ಮಾಡೋರು ನಪುಂಸಕರಾ ಅಥವಾ ದೇಶವನ್ನು ಪೂಜಿಸೋರಾ? ಈವರೆಗಿನ ಪಠ್ಯದಲ್ಲಿ ಘೋರಿ ಮಹಮ್ಮದ್, ಘಜ್ನಿ ಮಹಮ್ಮದ್, ಬಾಬರ್ ಬಗ್ಗೆ ಇತ್ತು. ನೀವು ಏಸು, ಪೈಗಂಬರ್ ಕೊಡಿ, ಆದ್ರೆ ಮೊದಲು ರಾಮ, ಕೃಷ್ಣರ ಬಗ್ಗೆ ಕೊಡಬೇಕಲ್ಬಾ? ಎಂದು ಪ್ರಭಾಕರ್ ಭಟ್ ಕಿಡಿ ಕಾರಿದ್ದಾರೆ.