ಕಡಬ: ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ ಆರೋಪದಡಿ ನಾಲ್ವರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ವಿವರ: ದೂರುದಾರೆ ಮಹಿಳೆ ಕಳೆದ 15 ವರ್ಷಗಳಿಂದ ಬಲ್ಯ ಗ್ರಾಮದ ಮನೆಯೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಏಪ್ರಿಲ್ 8 ರಂದು ಮನೆಯ ಮಾಲೀಕರು ಕಾರ್ಯಕ್ರಮ ನಿಮಿತ್ತ ಹೊರಗಡೆ ಹೋಗಿದ್ದಾಗ, ಮನೆಯ ಕಾವಲಿಗಿದ್ದು ತೋಟದ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನದ ವೇಳೆ ಮನೆಯ ರಸ್ತೆಯಲ್ಲಿ ಜೆಸಿಬಿ ಮೂಲಕ ಹೊಂಡ ತೆಗೆಯುತ್ತಿರುವುದನ್ನು ಗಮನಿಸಿ ಮಹಿಳೆ ಅವರಿಗೆ ಮಾಲೀಕರು ಬಂದ ಮೇಲೆ ಕೆಲಸ ಮಾಡುವಂತೆ ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಆರೋಪಿಗಳಾದ ರುಕ್ಮಯ್ಯ, ನೋಣಯ್ಯ, ಬಾಲಕೃಷ್ಣ ಮತ್ತು ಹರಿಪ್ರಸಾದ್ ಎಂಬುವವರುಮಹಿಳೆ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿದ್ದಾರೆಂದು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಗಳೆಲ್ಲಾ ಸೇರಿ ಮಹಿಳೆಗೆ ಮೇಲೆ ಕಲ್ಲು ಎಸೆದಿದ್ದು, ಇದರಿಂದ ಅವರ ಬೆನ್ನು ಮತ್ತು ಹೊಟ್ಟೆಯ ಭಾಗಕ್ಕೆ ಗಾಯಗಳಾಗಿವೆ ಎನ್ನಲಾಗಿದೆ. ಅಲ್ಲದೆ, ಅಲ್ಲಿಂದ ತೆರಳದಿದ್ದರೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ವಿವರಿಸಿದ್ದಾರೆ. ಘಟನೆಯ ನಂತರ ಗಾಯಗೊಂಡ ಮಹಿಳೆಯನ್ನು ಅವರ ಪತಿ ಕಡಬ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಅವರು ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಕಡಬ ಪೊಲೀಸರು ಆರೋಪಿತರ ವಿರುದ್ಧ ಎಸ್ಸಿ ಮತ್ತು ಎಸ್ಟಿ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆ 2015: ಸೆಕ್ಷನ್ 3(1)(s), 3(1)(r), 3(2)(va). ಭಾರತೀಯ ನ್ಯಾಯ ಸಂಹಿತೆ (BNS) 2023: ಸೆಕ್ಷನ್ 118(1) (ಗಾಯಗೊಳಿಸುವುದು), 352 (ಅವಮಾನ), 351(2) (ಕ್ರಿಮಿನಲ್ ಬೆದರಿಕೆ) ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ .ಉಪ್ಪಿನಂಗಡಿ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ ಕಡಬ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ


