ಕಡಬ: ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯೊಬ್ಬರು ನಾಪತ್ತೆಯಾಗಿರುವ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಐತೂರು ಗ್ರಾಮದ ಮಟ್ಟತ್ತಿಲ್ ಎಂಬಲ್ಲಿ ನಡೆದಿದೆ.
ಕೆ ಅನುಪ್ ಎಂಬವರ ಪತ್ನಿ ಸೌಮ್ಯ (34) ನಾಪತ್ತೆಯಾದ ಮಹಿಳೆ.
ಸೌಮ್ಯ ಐತೂರು ಗ್ರಾಮ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯಾಗಿದ್ದು, ಕೋರೋನಾ ವಾರಿಯರ್ ಆಗಿ ಕೂಡಾ ಇವರು ಕೆಲಸ ಮಾಡಿಕೊಂಡಿದ್ದರು. ಐತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗರ್ಭಿಣಿ ಮಹಿಳೆಯೋರ್ವರನ್ನು ಡೆಲಿವರಿಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗಲು ಇದೆ ಎಂದು ಹೇಳಿ ಹೊರಟ ಇವರು ನಂತರದಲ್ಲಿ ಕಾಣೆಯಾಗಿದ್ದಾರೆ.
ಆಟೋ ರಿಕ್ಷಾವನ್ನು ಬಾಡಿಗೆ ಮಾಡಿ ಕಡಬ ಸರಕಾರಿ ಆಸ್ಪತ್ರೆಗೆ ಬಂದಿದ್ದಾಗಿ ಮಾಹಿತಿ ಲಭಿಸಿದೆ. ಆಟೋರಿಕ್ಷಾ ಚಾಲಕನು ಕಡಬ ಸರ್ಕಾರಿ ಆಸ್ಪತ್ರೆಯವರೆಗೆ ಹೋಗಿ ಸೌಮ್ಯ ರನ್ನು ಬಿಟ್ಟು ಬಂದಿದ್ದರು. ನಂತರ ಸಂಜೆಯಾದರೂ ಸೌಮ್ಯ ಮನೆಗೆ ಬಾರದೇ ಇದ್ದುದರಿಂದ ಅನೂಪ್ ಅವರು ಸಂಬಂಧಿಕರ ಮತ್ತು ಪರಿಚಯಸ್ಥರ ಹಾಗೂ ಸುತ್ತಮುತ್ತ ಪರಿಸರ ವ್ಯಾಪ್ತಿಯಲ್ಲಿ ಹುಡುಕಾಟ ನಡೆಸಿದರೂ ಸೌಮ್ಯ ರವರು ಪತ್ತೆಯಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಸೌಮ್ಯ ರವರ ಪತಿ ಅನೂಪ್ ಕಡಬ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಇನ್ನು ಈ ಬಗ್ಗೆ ತನಿಖೆ ನಡೆಯುತ್ತಿದೆ.