ಚೆನ್ನೈ: ಕಬಡ್ಡಿ ಆಡುತ್ತಿರುವ ವೇಳೆ ವಿದ್ಯಾರ್ಥಿಯೊಬ್ಬ ಆಟದ ಮೈದಾನದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ಪನ್ರುತಿ ಬಳಿಯ ಮನ್ನಾಡಿಕುಪ್ಪಂ ಗ್ರಾಮದಲ್ಲಿ ನಡೆದಿದೆ. ಇನ್ನು ಗೆಳೆಯ ಅಗಲಿಕೆಯ ನೋವಿನಲ್ಲೇ ಟ್ರೋಫಿ ಗೆದ್ದ ಆತನ ಸ್ನೇಹಿತರು ಅದೇ ಟ್ರೋಫಿಯೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಸೇಲಂ ಜಿಲ್ಲೆಯ ಖಾಸಗಿ ಕಾಲೇಜಿನ ದ್ವಿತೀಯ ವರ್ಷದ ಬಿಎಸ್ಸಿ ವಿದ್ಯಾರ್ಥಿ ವಿಮಲ್ರಾಜ್ (22) ವಾರಾಂತ್ಯಕ್ಕೆ ಮನೆಗೆ ಬಂದಿದ್ದ. ನಿನ್ನೆ ಸಂಜೆ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಮುರಟ್ಟು ಕಾಳಾಯಿ ತಂಡವನ್ನು ಪ್ರತಿನಿಧಿಸಿದ್ದ.
ವಿಮಲ್ ರೈಡ್ ಮಾಡುತ್ತಿದ್ದ ವೇಳೆ, ಎದುರಾಳಿ ತಂಡದ ಸದಸ್ಯರು ಅವರನ್ನು ಎಳೆದು ಕೆಳಗೆ ಬೀಳಿಸಿದ್ದಾರೆ. ಬಳಿಕ ಮೇಲಕ್ಕೇಳಲು ಪ್ರಯತ್ನಿಸುತ್ತಿರುವ ವೇಳೆ ಮತ್ತೆ ನೆಲದ ಮೇಲೆ ಕುಸಿದು ಬಿದ್ದಿದ್ದಾನೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ವೇಳೆ ವಿಮಲ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಗೆಳೆಯನ ಅಗಲಿಕೆಯ ನೋವಿನ ನಡುವೆ ಮೈದಾನಕ್ಕಿಳಿದ ಮುರುಟ್ಟು ಕಾಳೈ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದ್ದು ವಿಶೇಷ. ಅಷ್ಟೇ ಅಲ್ಲದೆ ಗೆದ್ದ ಟ್ರೋಫಿಯೊಂದಿಗೆ ವಿಮಲ್ ರಾಜ್ ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದಾರೆ ಎಂದು ತಿಳಿದುಬಂದಿದೆ.