ಪುತ್ತೂರು: ಪುತ್ತೂರು ಬಾಲವನ ರಾಜ್ಯ ಪ್ರಶಸ್ತಿಗೆ ಕಂಪ್ಯೂಟರ್ ವಿಜ್ಞಾನಿ ಕೆ.ಪಿ.ರಾವ್ ಹಾಗೂ ಪತ್ರಿಕೋಧ್ಯಮದ ಜೀವಮಾನದ ಸಾಧನೆಗಾಗಿ ಹಿರಿಯ ಪತ್ರಕರ್ತ ಬಿ.ಟಿ ರಂಜನ್ ಅವರಿಗೆ ವಿಶೇಷ ಸಾಧನಾ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಪುತ್ತೂರು ಬಾಲವನ ಸಮಿತಿ ಅಧ್ಯಕ್ಷ, ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್ ಸುದ್ದಿಗೋಷ್ಟಿಯಲ್ಲಿ ಈ ಪ್ರಶಸ್ತಿ ಘೋಷಿಸಿದರು.ಅ 10 ರಂದು ಪುತ್ತೂರು ಕಾರಂತ ಭವನದಲ್ಲಿ ರಾಜ್ಯಮಟ್ಟದ ಕಾರಂತ ಜನ್ಮದಿನಾಚರಣೆ, ಪ್ರಶಸ್ತಿ ಪ್ರದಾನ, ಬರಹದ ಮನೆ ಉದ್ಘಾಟನೆ, ಕೃತಿ ಬಿಡುಗಡೆ ಸಮಾರಂಭ ನಡೆಯಲಿದ್ದು, ಕನ್ನಡ ಕಲಿಸಿದ ವಿಜ್ಞಾನಿ, ಕೀಲಿಮಣೆ ವಿನ್ಯಾಸ ತಜ್ಞ ಕಿನ್ನಿಕಂಬಳ ಪದ್ಮನಾಭ ರಾವ್ (ಕೆ.ಪಿ ರಾವ್) ಬಾಲವನ ರಾಜ್ಯ ಪ್ರಶಸ್ತಿ, ಹಿರಿಯ ಪತ್ರಕರ್ತ ಬಿ.ಟಿ ರಂಜನ್ ಅವರ ಪತ್ರಿಕೋದ್ಯಮದ ಜೀವಮಾನ ಸಾಧನೆಗಾಗಿ ವಿಶೇಷ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ದ.ಕ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಕಾರಂತರ ಜನ್ಮ ದಿನಾಚರಣೆ ಉದ್ಘಾಟಿಸಲಿರುವರು. ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಪ್ರಶಸ್ತಿ ಪ್ರದಾನ ನೆರವೇರಿಸಲಿದ್ದಾರೆ. ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್ ನವೀಕೃತಗೊಂಡ ಬರಹದ ಮನೆ ಉದ್ಘಾಟಿಸಲಿದ್ದಾರೆ. ಬಾಲವನ ಮತ್ತು ಕಾರಂತರ ಕುರಿತ ಬಾಲವನದಲ್ಲಿ ಭಾರ್ಗವ ಎಂಬ ಸಂಪಾದಿತ ಕೃತಿಯನ್ನು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಾನ್ಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಿಡುಗಡೆಗೊಳಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದಾರೆ. ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್, ಬಾಲವನ ವಿಶೇಷ ಆಡಳಿತಾಧಿಕಾರಿ ಸುಂದರ ಕೇನಾಜೆ, ನಗರಸಭಾ ಅಧ್ಯಕ್ಷ ಜೀವಂಧರ ಜೈನ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹಾಗೂ ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕುಮಾರ, ಮಂಗಳೂರು ವಿ.ವಿ ಕಾರಂತ ಅಧ್ಯಯನ ಪೀಠದ ಸದಸ್ಯ ಡಾ.ನರಸಿಂಹಮೂರ್ತಿ ಆರ್ ಉಪಸ್ಥಿತರಿರುವರು. ಕೋವಿಡ್ ನಿಯಮದಂತೆ ಕಾರ್ಯಕ್ರಮ ನಡೆಯಲಿದೆ ಎಂದರು. ಬಾಲವನ ವಿಶೇಷ ಆಡಳಿತಾಕಾರಿ ಸುಂದರ ಕೇನಾಜೆ ಉಪಸ್ಥಿತರಿದ್ದರು.