ರಾಯ್ಪುರ: ಇಲ್ಲಿನ ಪತ್ರಕರ್ತನೊಬ್ಬ ರಸ್ತೆ ಹಗರಣಕ್ಕೆ ಸಂಬಂಧಿಸಿದಂತೆ ವರದಿ ಮಾಡಿದ ಮರುದಿನವೇ ಗುತ್ತಿಗೆದಾರನೊಬ್ಬನ ಮನೆ ಬಳಿ ಪತ್ರಕರ್ತನ ಶವ ಪತ್ತೆಯಾಗಿರುವ ಘಟನೆ ನಡೆದಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಕೊಲೆಯಾದ ಪತ್ರಕರ್ತ ಮುಕೇಶ್ ಚಂದ್ರಾಕರ್ ಎಂದು ಹೇಳಲಾಗಿದೆ.
ಇವರು ಗುತ್ತಿಗೆದಾರರೊಬ್ಬರ ಭ್ರಷ್ಟಾಚಾರದ ಬಗ್ಗೆ ರಸ್ತೆ ಹಗರಣದ ವರದಿ ಮಾಡಿದ್ದರು. ನಂತರದಲ್ಲಿ ತಮ್ಮ ಮನೆಯಿಂದ ಹೊರಟ್ಟಿದ್ದು, ಮನೆಗೆ ವಾಪಾಸ್ಸಾಗಲಿಲ್ಲ. ಮರುದಿನ ಅವರ ಸಹೋದರ ಯುಕೇಶ್ ಕಾಣೆಯಾದ ದೂರನ್ನು ದಾಖಲಿಸಿದ್ದರು. ತನಿಖೆಯನ್ನು ಪ್ರಾರಂಭಿಸಿದ ನಂತರ, ಪೊಲೀಸರು 32 ವರ್ಷದ ವ್ಯಕ್ತಿಯ ಶವವನ್ನು ಅವರ ಮನೆಯಿಂದ ಬಹಳ ದೂರದಲ್ಲಿರುವ ಛತನ್ ಪಾರಾ ಬಸ್ತಾರ್ ವಿಭಾಗದಲ್ಲಿನ ಗುತ್ತಿಗೆದಾರರ ಒಡೆತನದ ಶೆಡ್ನಲ್ಲಿನ ಸೆಪ್ಟಿಕ್ ಟ್ಯಾಂಕ್ನಲ್ಲಿ ಪತ್ತೆಯಾಗಿದೆ.
ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಕೇಶ್ ಅವರ ಸೋದರ ಸಂಬಂಧಿ ರಿತೇಶ್ ಚಂದ್ರಾಕರ್ನನ್ನು ಶನಿವಾರ ರಾಯ್ಪುರ ವಿಮಾನ ನಿಲ್ದಾಣದಿಂದ ಬಂಧಿಸಲಾಗಿದ್ದು, ಮೇಲ್ವಿಚಾರಕ ಮಹೇಂದ್ರ ರಾಮ್ಟೆಕೆ ಮತ್ತು ಮುಕೇಶ್ ಅವರ ಇನ್ನೊಬ್ಬ ಸಂಬಂಧಿ ದಿನೇಶ್ ಚಂದ್ರಾಕರ್ನನ್ನು ಬಿಜಾಪುರದಿಂದ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಚಂದ್ರಾಕರ್ ತನ್ನ ಸೋದರ ಸಂಬಂಧಿ ರಿತೇಶ್ ಮತ್ತು ಮಹೇಂದ್ರ ರಾಮ್ಟೆಕೆ ಅವರೊಂದಿಗೆ ಸುರೇಶ್ ಎಂಬಾತನ ಶೆಡ್ನಲ್ಲಿ ರಾತ್ರಿ ಊಟ ಮಾಡಿದ್ದರು. ಈ ವೇಳೆ ಪರಸ್ಪರರ ನಡುವೆ ವಾಗ್ವಾದ ಶುರುವಾಗಿದೆ. ರಿತೇಶ್ ಮತ್ತು ಮಹೇಂದ್ರ ಇಬ್ಬರೂ ಚಂದ್ರಾಕರ್ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿ, ಸ್ಥಳದಲ್ಲೇ ಕೊಂದಿದ್ದಾರೆ. ನಂತರ ಆತನ ದೇಹವನ್ನು ಸೆಪ್ಟಿಕ್ ಟ್ಯಾಂಕ್ನಲ್ಲಿ ಬಚ್ಚಿಟ್ಟು, ಅಪರಾಧವನ್ನು ಮರೆಮಾಚಲು ಸಿಮೆಂಟ್ನಿಂದ ಮುಚ್ಚಿದ್ದಾರೆ. ಮುಖೇಶ್ ಫೋನ್ ಹಾಗೂ ಕೊಲೆಗೆ ಬಳಸಿದ್ದ ಆಯುಧವನ್ನೂ ವಿಲೇವಾರಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನು ಕೊಲೆಯ ಹಿಂದಿನ ಮಾಸ್ಟರ್ ಮೈಂಡ್ ಎನ್ನಲಾದ ಗುತ್ತಿಗೆದಾರ ಸುರೇಶ್ ಚಂದ್ರಾಕರ್ ಪರಾರಿಯಾಗಿದ್ದಾನೆ.