ಮಂಗಳೂರು:2021-22 ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು 20 ನೇ ಸ್ಥಾನಕ್ಕೆ ಕುಸಿದಿದೆ. ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿಯ ಡಬಲ್ ಇಂಜಿನ್ ಸರಕಾರವು ಶೈಕ್ಷಣಿಕ ಕ್ಷೇತ್ರದಲ್ಲಿ ಸೃಷ್ಟಿಸಿದ ಗೊಂದಲವೇ ಇದಕ್ಕೆ ಕಾರಣ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ ಆರೋಪಿಸಿದ್ದಾರೆ.
ಮಂಗಳೂರು ನಗರದಲ್ಲಿ ಮಾತನಾಡಿದ ಅವರು, ಪ್ರತೀ ವರ್ಷ ದ.ಕ.ಜಿಲ್ಲೆಯು ಎಸೆಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಅಥವಾ ದ್ವಿತೀಯ ಸ್ಥಾನದಲ್ಲಿರುತ್ತಿತ್ತು. ಆದರೆ ಈ ಬಾರಿ ೨೦ನೆ ಸ್ಥಾನಕ್ಕೆ ಸಮಾಧಾನಪಟ್ಟು ಕೊಳ್ಳುವಂತಾಗಿದೆ. ಈ ಬಗ್ಗೆ ದ.ಕ.ಜಿಲ್ಲೆಯ ವಿದ್ಯಾರ್ಥಿಗಳ ಹೆತ್ತವರು, ಪೋಷಕರು ಗಮನಹರಿಸಬೇಕಿದೆ ಎಂದರು.
ಶೈಕ್ಷಣಿಕ ಕ್ಷೇತ್ರದಲ್ಲಿ ದ.ಕ.ಜಿಲ್ಲೆಯ ಸಾಧನೆಗೆ ದೇಶ-ವಿದೇಶಗಳಲ್ಲಿ ಒಳ್ಳೆಯ ಹೆಸರಿದೆ. ಪ್ರಶಂಸೆಯೂ ವ್ಯಕ್ತವಾಗಿದೆ. ಜಗತ್ತಿನ 12 ಬೃಹತ್ ಕಂಪೆನಿಗಳ ಸಿಇಒಗಳು ಕನ್ನಡಿಗರಾಗಿದ್ದಾರೆ. ಆದರೆ ರಾಜ್ಯ ಮತ್ತು ಕೇಂದ್ರದಲ್ಲಿರುವ ಬಿಜೆಪಿ ಸರಕಾರಗಳು ವಿದ್ಯಾರ್ಥಿಗಳ ಮಧ್ಯೆ ಮತೀಯ ಭಾವನೆ ಸೃಷ್ಟಿಸುತ್ತಲೇ ಇದೆ. ಜೆಡಿಎಸ್ ಸರಕಾರವಿದ್ದಾಗ ಮಕ್ಕಳ ಕೈಗೆ ಲ್ಯಾಪ್ಟಾಪ್, ಟ್ಯಾಬ್ ಕೊಟ್ಟಿದ್ದರೆ ಬಿಜೆಪಿ ಸರಕಾರವು ತ್ರಿಶೂಲ, ಬಂದೂಕು ಕೊಟ್ಟು ದಾರಿ ತಪ್ಪಿಸುತ್ತಿದೆ ಎಂದು ಎಂ.ಬಿ.ಸದಾಶಿವ ಆರೋಪಿಸಿದರು.