ಮಂಗಳೂರು: ತುಳು ಭಾಷೆ ಕರ್ನಾಟಕದ ಕರಾವಳಿ ಭಾಗದಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲುವ ತುಳುನಾಡಿಗರ ಮಾತೃಭಾಷೆ. ಮನೆಯಿಂದ ಹಿಡಿದು ಹಾದಿಬೀದಿಯಲ್ಲಿ ಸಿಕ್ಕ ಜನರೂ ಕೂಡ ತಮ್ಮ ಮಾತೃಭಾಷೆ ಯಾವುದೇ ಇದ್ದರೂ ವ್ಯಾವಹಾರಿಕವಾಗಿ ಬಳಸುವಾಗ ತುಳುವನ್ನೇ ಹೆಚ್ಚಾಗಿ ನೆಚ್ಚಿಕೊಳ್ಳುತ್ತಾರೆ.
ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ಸಿಗಬೇಕು, ತುಳು ಭಾಷೆಯನ್ನು ಕೂಡ ‘ನೂತನ ಶಿಕ್ಷಣ ನೀತಿ-2020’ರಡಿಯಲ್ಲಿ ಸೇರಿಸುವ ಬಗೆಗೆ ಮನವಿ ಮಾಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಗಮನ ಸೆಳೆಯಲು ಜೈ ತುಳುನಾಡು ಸಂಘಟನೆ ಆಗಸ್ಟ್ 16ರಂದು EducationInTulu ಅನ್ನುವ ಹ್ಯಾಷ್ಟ್ಯಾಗ್ನಲ್ಲಿ ಟ್ವೀಟ್ ಅಭಿಯಾನ ಆಯೋಜಿಸಿದೆ.
ಕನ್ನಡದ ನವರಸ ನಾಯಕ ಜಗ್ಗೇಶ್ ಕೂಡಾ ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದು, ಟ್ವಿಟ್ ಮಾಡಿದ್ದಾರೆ. ನಾನು ಕೂಡಾ ನಿಮ್ಮೊಂದಿಗೆ ತುಳು ಭಾಷೆ ಅಭಿಯಾನಕ್ಕೆ ಬರುತ್ತೇನೆ ಎಂದು ಜಗ್ಗೇಶ್ ಟ್ವಿಟ್ ಮಾಡಿದ್ದಾರೆ.
ಈ ಹಿಂದೆ ಜೈ ತುಳುನಾಡ್ ಸಂಘಟನೆ ತುಳು ಲಿಪಿಯ ಜನ ಜಾಗೃತಿಯ ದೃಷ್ಟಿಯಿಂದ ಮತ್ತು ತುಳು ಲಿಪಿಯ ಅಪಪ್ರಚಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಡೆಸಿದ್ದ ಅಭಿಯಾನದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸೇರಿದಂತೆ 30 ಸಾವಿರಕ್ಕೂ ಹೆಚ್ಚು ಮಂದಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇಧಕ್ಕೆ ಸೇರ್ಪಡೆಗೊಳಿಸುವ ಹೋರಾಟಕ್ಕೂ ಅಣ್ಣಾಮಲೈ ಕೈಜೋಡಿಸಿದ್ದರು.