ಬೆಂಗಳೂರು : ಬೆಂಗಳೂರಿನ ಎಂಎಸ್ ರಾಮಯ್ಯ ಅಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯನೊಬ್ಬನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಅಧಿಕಾರಿಗಳು ಬಂಧಿಸಿದ್ದಾರೆ. ನಾಳೆಯಿಂದ ಕೊವಿಡ್ ಕೇರ್ ಸೆಂಟರ್ ನಲ್ಲಿ ಕಾರ್ಯ ನಿರ್ವಹಿಸಬೇಕಿದ್ದ ಅಬ್ದುಲ್ ರೆಹಮಾನ್ ಗೆ ಕೋಳ ತೊಡಗಿಸಲಾಗಿದೆ. ಅಬ್ದುರ್ ರೆಹಮಾನ್ ನಮ್ಮ ಕಾಲೇಜಿನಲ್ಲೇ ವ್ಯಾಸಂಗ ಮಾಡಿದ್ದು ಪಿಜಿ ವಿದ್ಯಾರ್ಥಿಯಾಗಿದ್ದು, ಆಸ್ಪತ್ರೆಯ ಖಾಯಂ ವೈದ್ಯ ಅಲ್ಲ ಎಂದು ಎಂಎಸ್ ರಾಮಯ್ಯ ಕಾಲೇಜ್ ಹಾಗೂ ಆಸ್ಪತ್ರೆ ಸ್ಪಷ್ಟನೆ ನೀಡಿದೆ.
ಬಸವನಗುಡಿಯ ಅಪಾರ್ಟ್ಮೆಂಟ್ ನಲ್ಲಿ ವಾಸಿಸುತ್ತಿದ್ದ 28 ವರ್ಷ ವಯಸ್ಸಿನ ಕಣ್ಣಿನ ವೈದ್ಯ (ophthalmologist) ಅಬ್ದುಲ್ ರೆಹಮಾನ್ 2014ರಿಂದ ಇರಾಕಿನ ಉಗ್ರ ಸಂಘಟನೆ ಐಎಸ್ಐಎಸ್ ಜೊತೆ ಸಂಪರ್ಕ ಹೊಂದಿರುವುದು ಪತ್ತೆಯಾಗಿದೆ. ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾವಿನ್ಸ್ (ಐಎಸ್ ಕೆಪಿ) ಸಂಘಟನೆಯ ಸದಸ್ಯ ಎಂದು ತಿಳಿದು ಬಂದಿದೆ.
2020ರ ಮಾರ್ಚ್ ತಿಂಗಳಿನಲ್ಲಿ ದೆಹಲಿ ಪೊಲೀಸರ ವಿಶೇಷ ದಳ ದಾಖಲಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಾಗ ಜಾಮೀಯಾ ನಗರದ ಓಕ್ಲಾ ವಿಹಾರ್ ನಲ್ಲಿ ನೆಲೆಸಿದ್ದ
ಕಾಶ್ಮೀರಿ ದಂಪತಿ ಜಹಾನ್ ಜೈಬ್ ವನಿ ಹಾಗೂ ಆತನ ಪತ್ನಿ ಹೀನಾ ಬಷೀರ್ ಬೇಗ್ ಬಂಧಿಸಲಾಗುತ್ತು. ಇವರಿಬ್ಬರು ಐಎಸ್ ಕೆಪಿ ಸಂಘಟನೆಯ ಸದಸ್ಯರಾಗಿದ್ದರು. ನಿಷೇಧಿತ ಉಗ್ರ ಸಂಘಟನೆಯ ಸಕ್ರಿಯ ಕಾರ್ಯಕರ್ತರಾಗಿದ್ದ ಇವರು ತಿಹಾರ್ ಜೈಲಿನಲ್ಲಿರುವ ಉಗ್ರ ಮುಖಂಡ ಅಬ್ದುಲ್ ಬಸಿತ್ ಜೊತೆ ಸಂಪರ್ಕದಲ್ಲಿದ್ದರು.
ವಿಚಾರಣೆ ವೇಳೆ ಪುಣೆಯ ಇಬ್ಬರು ನಿವಾಸಿಗಳ ಬಗ್ಗೆ ತಿಳಿಸಿದ್ದರು. ತಕ್ಷಣವೇ ಎನ್ಐಎ ತಂಡವು ಸಾದಿಯಾ ಅನ್ವರ್ ಶೇಖ್ ಹಾಗೂ ನಬೀಲ್ ಸಿದ್ದಿಕ್ ಖಾತ್ರಿ ಎಂಬುವರನ್ನು ಬಂಧಿಸಿದ್ದಾರೆ. ಇವರೆಲ್ಲರು ಭಾರತದಲ್ಲಿ ನಾಗರಿಕ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯ ಹೆಸರಿನಲ್ಲಿ ವಿಧ್ವಂಸಕ ಕೃತ್ಯ ಎಸಗಲು ಐಎಸ್ಐಎಸ್/ ಐಎಸ್ ಕೆಪಿಯಿಂದ ತರಬೇತಿ ಪಡೆದವರಾಗಿದ್ದಾರೆ.
ಜಹಾನ್ ಜೈಬ್ ವನಿ ಜೊತೆ ನಿರಂತರವಾಗಿ ಸಂಪರ್ಕ ಹೊಂದಿದ್ದೆ. 2014ರಲ್ಲಿ ಸಿರಿಯಾಕ್ಕೂ ಭೇಟಿ ಮಾಡಿದ್ದೆ. ಭಾರತದಲ್ಲಿ ಹಲವು ಸಂಚು ರೂಪಿಸಲು ಯೋಜನೆ ಹಾಕಿಕೊಂಡಿದ್ದೆವು. ಸಿರಿಯಾದಲ್ಲಿ ಗಾಯಗೊಂಡ ಉಗ್ರರ ನೆರವಿಗೆ ಮೆಡಿಕಲ್ ಅಪ್ಲಿಕೇಷನ್ ರೂಪಿಸುತ್ತಿದ್ದೆ. ಐಸೀಸ್ ಯೋಧರಿಗೆ ತಾಂತ್ರಿಕ, ವೈದ್ಯಕೀಯ ನೆರವು ನೀಡಿದ್ದೆ ಎಂದು ಅಬ್ದುಲ್ ರೆಹಮಾನ್ ಹೇಳಿದ್ದಾನೆ.
ಬಸವನಗುಡಿಯಲ್ಲಿ ಅಬ್ದುಲ್ ರೆಹಮಾನ್ ಮನೆಯಿಂದ ಲ್ಯಾಪ್ ಟಾಪ್, ಪುಸ್ತಕ, ಪೆನ್ ಡ್ರೈವ್, ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಇನ್ನು ಎರಡು ಕಡೆ ದಾಳಿ ನಡೆಸಲಾಗಿದೆ.