ಪುತ್ತೂರು ; ಇಲ್ಲಿನ ಈಶ್ವರಮಂಗಲದ ಪೇಟೆಯ ಜಂಕ್ಷನ್ ನಲ್ಲಿ ಕೆಎ 21 ಎಫ್ 0002 ನಂಬರ್ನ ಬಸ್ ನಿರ್ವಾಹಕ ಪ್ರಯಾಣಿಕನಿಗೆ ಕಾಲಿನಿಂದ ಒದ್ದು ಹೊರಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಇದೀಗ ನಿರ್ವಾಹಕನನ್ನು ಅವಾಮನತುಗೊಳಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಆದೇಶ ಹೊರಡಿಸಿದೆ.
ನಿನ್ನೆ ಸಂಜೆ ವಾಹನ ಸಂಖ್ಯೆ ಎಫ್ 0002 ಅನುಸೂಚಿ ಸಂಖ್ಯೆ159/160 ರಲ್ಲಿ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಿದ ಸುಖರಾಜ ರೈ ಬಿಲ್ಲೆ ಸಂಖ್ಯೆ. 2994 ಇವರು ಪುತ್ತೂರು ತಾಲೂಕಿನ ಈಶ್ವರ ಮಂಗಲದಲ್ಲಿ ಓರ್ವ ಮದ್ಯಪಾನ ಮಾಡಿದ ಪ್ರಯಾಣಿಕನನ್ನು ವಾಹನದಿಂದ ಕೆಳಗಡೆಗೆ ಇಳಿಸುವಾಗ ಅಮಾನವೀಯವಾಗಿ ವರ್ತಿಸಿ, ಅವರಿಗೆ ಹೊಡೆದು ಕಾಲಿನಿಂದ ಒದ್ದು ಬೀಳಿಸಿರುತ್ತಾರೆ. ನಿರ್ವಾಹಕರ ಈ ರೀತಿಯ ವರ್ತನೆಗೆ ಕಠಿಣ ಶಿಸ್ತಿನ ಕ್ರಮ ಕೈಗೊಳ್ಳಲಾಗಿದ್ದು, ಅವರನ್ನು ಈಗಾಗಲೇ ಕರ್ತವ್ಯದಿಂದ ನಿಲುಗಡೆಗೊಳಿಸಿ, ಅಮಾನತುಗೊಳಿಸಲಾಗಿದೆ. ನಿಗಮದ ಚಾಲನಾ ಸಿಬ್ಬಂದಿಗೆ ಸಾರ್ವಜನಿಕ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ನಿರಂತರ ತರಬೇತಿ ಹಾಗೂ ತಿಳುವಳಿಕೆ ನೀಡಿದ್ದಾಗ್ಯೂ ಸಹ ಈ ರೀತಿಯ ಘಟನೆ ನಡೆದಿರುವುದು ದುಃಖದ ಸಂಗತಿ.
ನಿಗಮದ ಸಿಬ್ಬಂದಿಗೆ ಇನ್ನೂ ಹೆಚ್ಛಿನ ತರಬೇತಿ ನೀಡಿ ಪ್ರಯಾಣಿಕರೊಡನೆ ಸೌಜನ್ಯವಾಗಿ ವರ್ತಿಸುವ ಸಂಬಂಧ ಕ್ರಮಕೈಗೊಳ್ಳಲಾಗುವುದು ಹಾಗೂ ಈ ರೀತಿಯ ಘಟನೆಗಳಿಗೆ ಕಾರಣರಾಗುವ ಸಿಬ್ಬಂದಿಮೇಲೆ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಲಾಗಿದೆ.ಸದರಿ ಪ್ರಯಾಣಿಕರ ವೈದ್ಯಕೀಯ ವೆಚ್ಚವನ್ನು ನಿಗಮವು ಭರಿಸಲಿದೆ.ನಿಗಮವು ಈ ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸುತ್ತದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.