ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಂದು ಕಡೆ ಸಿಸಿಬಿ ಅಧಿಕಾರಿಗಳು ಬೇರೆ ಬೇರೆ ಮೂಲಗಳ ಮೂಲಕ ತನಿಖೆ ನಡೆಸುತ್ತಿದ್ದರೆ, ಮತ್ತೊಂದು ಕಡೆ ಸದ್ದೇ ಇಲ್ಲದೇ ISD ಕೂಡ ಭರ್ಜರಿ ಬೇಟೆಗೆ ಇಳಿದಿದೆ. ಯಾರಿಗೂ ಗೊತ್ತಾಗದಂತೆ ತನಿಖೆ ನಡೆಸುತ್ತಿರುವ ISD ಇಂದು ಲೂಸ್ ಮಾದ ಯೋಗಿ, ಹಾಗೇ ಕ್ರಿಕೆಟರ್ ಅಯ್ಯಪ್ಪ ಅವರಿಗೆ ನೋಟಿಸ್ ನೀಡಿ, ವಿಚಾರಣೆ ನಡೆಸಿದೆ.
ಇದರ ಬೆನ್ನಲ್ಲೇ ಮಂಗಳೂರು ಮೂಲದ ಖ್ಯಾತ ಕಿರುತೆರೆ ನಟಿಗೂ ISD ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿರೋದು ಕುತೂಹಲಕ್ಕೆ ಕಾರಣವಾಗಿದೆ. ಮಂಗಳೂರು ಮೂಲದ ನಟಿ, ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಗೀತಾ ಭಾರತಿ ಭಟ್ ಅವರಿಗೆ ISD ನಾಳೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗೀತಾ, “ನನಗೆ ನೋಟಿಸ್ ನೀಡಿರೋದು ಶಾಕ್ ಉಂಟು ಮಾಡಿದೆ. ಯಾಕೆ ನೋಟಿಸ್ ನೀಡಿದ್ದಾರೆ ಗೊತ್ತಿಲ್ಲ. ನಾಳೆ ವಿಚಾರಣೆಗೆ ಹಾಜರಾಗ್ತೀನಿ” ಅಂತಾ ಹೇಳಿದ್ದಾರೆ.
ಒಂದು ಕಡೆ ಸಿಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರೆ, ಮತ್ತೊಂದು ಕಡೆ ISD ಕೂಡ ಡ್ರಗ್ಸ್ ಜಾಲವನ್ನು ಬೇಧಿಸೋದಕ್ಕೆ ಎಲ್ಲಾ ಪ್ರಯತ್ನ ಮಾಡುತ್ತಿದೆ. ಇದು ಎಲ್ಲಿಗೆ ಹೋಗಿ ಮುಟ್ಟುತ್ತೆ, ಇನ್ನೆಷ್ಟು ಹೆಸರುಗಳು ಬಯಲಾಗುತ್ತೆ ಕಾದು ನೋಡ್ಬೇಕು.