ಬೆಂಗಳೂರು: ರಾಜ್ಯದಲ್ಲಿ ಮಹಿಳಾ ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳಿಬ್ಬರ ನಡುವಿನ ವಾರ್ ಭುಗಿಲೆದ್ದಿದೆ.
ಕೆ.ಆರ್. ನಗರ ಶಾಸಕ ಸಾ.ರಾ. ಮಹೇಶ್ ಜೊತೆಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸಂಧಾನ ಮಾಡಿಕೊಂಡಿದ್ದಾರೆ ಎನ್ನಲಾದ ಫೋಟೋ ಬಹಿರಂಗವಾದ ಬೆನ್ನಲ್ಲೇ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ರಾಜಿ ಸಂಧಾನದ ಬಗ್ಗೆ ಕಠಿಣ ಪ್ರಶ್ನೆಗಳನ್ನೆತ್ತಿದ್ದಾರೆ.
ಕಳೆದ ಶುಕ್ರವಾರ ವಿಧಾನಸಭೆಯಲ್ಲಿ ಕೆ.ಆರ್. ನಗರ ಶಾಸಕ ಸಾ.ರಾ. ಮಹೇಶ್ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ವೇಳೆ ಬಟ್ಟೆ ಬ್ಯಾಗ್ ಹಗರಣ, ತಮ್ಮ ವಿರುದ್ಧದ ರಾಜಕಾಲುವೆ ಒತ್ತವರಿ ಆರೋಪದ ಬಗ್ಗೆ ಪ್ರಸ್ತಾಪಿಸಿ ರೋಹಿಣಿ
ಸಿಂಧೂರಿ ರಾಜಿ ಸಂಧಾನಕ್ಕೆ ಬಂದಿದ್ದ, ಸಂದೇಶ ಕಳುಹಿಸಿದ್ದ ಬಗ್ಗೆ ಬಹಿರಂಗವಾಗಿ ಹೇಳಿದ್ದರು. ಅದರ ಬೆನ್ನಲ್ಲೇ ಶಾಸಕ ಸಾ.ರಾ. ಮಹೇಶ್, ಐಎಎಸ್ ಅಧಿಕಾರಿಗಳಾದ ಮೇಜರ್ ಮಣಿವಣ್ಣನ್ ಹಾಗೂ ರೋಹಿಣಿ ಸಿಂಧೂರಿ ಕುಳಿತು ಮಾತನಾಡುತ್ತಿದ್ದಾರೆ ಎನ್ನಲಾದ ಫೋಟೋ ಬಹಿರಂಗವಾಗಿತ್ತು.
ಇದರ ಬೆನ್ನಲ್ಲೇ ರೋಹಿಣಿ ಸಿಂಧೂರಿ ವಿರುದ್ಧ ಗುರುತರ ಆರೋಪಗಳನ್ನು ಮಾಡಿ ಸುಮಾರು 19 ಪ್ರಶ್ನೆಗಳನ್ನು ಐಪಿಎಸ್ ಅಧಿಕಾರಿ ಡಿ. ರೂಪಾ ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ರೋಹಿಣಿ ಸಿಂಧೂರಿ ತಮ್ಮ ಆಕ್ಷೇಪಾರ್ಹವೆನಿಸಬಹುದಾದ ಫೋಟೋಗಳನ್ನು ಕೂಡಾ ಹಿರಿಯ ಐಎಎಸ್ ಅಧಿಕಾರಿಗಳಿಗೆ ಕಳುಹಿಸಿದ್ದರು ಎಂದು ಆರೋಪ ಮಾಡಿರುವ ರೂಪಾ, ಆ ಪೋಟೋಗಳನ್ನು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದಾರೆ.
ಐಎಎಸ್ ಅಧಿಕಾರಿ ಹಾಲಿ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಕರಕುಶಲ ಅಭಿವೃದ್ಧಿ ನಿಗಮದ ಎಂಡಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.