ಉಡುಪಿ: ಉಡುಪಿ ಜಿಲ್ಲೆಯ ಶಂಕರಪುರದ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಅವಮಾನಿಸಿರುವ ಕಾರಣ ಶಿಕ್ಷಣ ಸಂಸ್ಥೆಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ವಿದ್ಯಾರ್ಥಿನಿಯ ತಂದೆ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿಕೊಂಡಿರುವ ಕಾಪುವಿನ ಇನ್ನಂಜೆ ಗ್ರಾಮದ ವಿದ್ಯಾರ್ಥಿನಿಯ ತಂದೆ ರಾಘವೇಂದ್ರ ಸಿ ಅವರು, ತಮ್ಮ ಮಗಳು ಅನನ್ಯ ಆರ್ ಶೆಟ್ಟಿ ಒಂದನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಇದೇ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದು, ಇದೀಗ ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೇರೆ ಕಾಲೇಜಿಗೆ ಸೇರ್ಪಡೆಗೊಳಿಸುವುದಕ್ಕೆ ಅಗತ್ಯವಿದ್ದುದರಿಂದ ತಿಂಗಳ ಹಿಂದೆ ಮಾರ್ಕ್ಸ್ ಕಾರ್ಡ್ ಪಡೆದುಕೊಳ್ಳುವುದಾಗಿ ಶಾಲೆಗೆ ತೆರಳಿದ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಬಾಕಿ ಇದ್ದ ಶುಲ್ಕ ಪಾವತಿಸಿ ಮಾರ್ಕ್ಸ್ ಕಾರ್ಡ್ ಪಡೆದುಕೊಳ್ಳಿ ಎಂದು ತಿಳಿಸಿದ್ದರು.
ಆದರೆ ಕೋವಿಡ್ ಹಿನ್ನೆಲೆ ತೀವ್ರ ಹಣಕಾಸಿನ ತೊಂದರೆಯಿಂದ ಬಳಲುತ್ತಿದ್ದ ಕಾರಣ ಬಾಕಿ ಶುಲ್ಕ ಪಾವತಿಸಲು ಸಮಯವಕಾಶವನ್ನು ಕೊಡಿ ಹಾಗೂ ಶುಲ್ಕವನ್ನು ಸ್ವಲ್ಪ ಕಡಿಮೆ ಮಾಡಿ ಎಂದು ಮುಖ್ಯೋಪಾಧ್ಯಾಯಿನಿ ಬಳಿ ಕೇಳಿಕೊಂಡ ಬಳಿಕ ಅವರು ನಿಮಗೆ 5 ಸಾವಿರಗಳನ್ನು ಕಟ್ಟಲು ಗತಿಯಿಲ್ಲವೇ ಅಂತಾ ಅವಮಾನಿಸಿದ್ದಾರೆ.
ನಂತರ ಎರಡೂವರೆ ಸಾವಿರ ರೂ.ಗಳನ್ನಾದರೂ ಕಟ್ಟಿದರೆ ಮಾತ್ರ ಮಾರ್ಕ್ಸ್ ಕಾರ್ಡ್ ಕೊಡುವುದಾಗಿ ತಿಳಿಸಿದರು. ಬಳಿಕ ಸೆ.1ರಂದು ಟಿಸಿ ಗಾಗಿ ಅನನ್ಯ ಅವರು ಶಾಲೆಗೆ ಫೋನ್ ಮಾಡಿ ಟಿಸಿ ಕೇಳಿದಾಗ ಶಾಲಾ ಕಛೇರಿಯವರು ನಾಳೆ ಬಂದು 200 ಪಾವತಿಸಿ ಟಿಸಿ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಬಳಿಕ ಮರುದಿನ ಬೆಳಿಗ್ಗೆ 200 ರೂ. ಪಾವತಿಸಿ ಟಿಸಿ ಕೇಳಿದಾಗ ಪ್ರಿಯಾ ಡೇಸಾರವರು ಮಧ್ಯ ಪ್ರವೇಶಿಸಿ ಬಾಕಿಯಿರುವ ಎರಡೂವರೆ ಸಾವಿರ ರೂಪಾಯಿಗಳನ್ನು ಪಾವತಿಸಿ, ಇಲ್ಲವೆಂದರೆ ಟಿಸಿ ಕೊಡಲು ಆಗುವುದಿಲ್ಲ ಎಂದಿದ್ದಾರೆ.
ಈ ವೇಳೆ ಅನನ್ಯ ಅವರು ತಂದೆ ಮಂಗಳೂರಿಗೆ ಹೋಗಿದ್ದಾರೆ. ಬಂದ ನಂತರ ಶುಲ್ಕ ಪಾವತಿಸಲು ಹೇಳುತ್ತೇನೆ ಎಂದು ಕೇಳಿಕೊಂಡಿದ್ದಾರೆ. ಆಗ ಪ್ರಿಯಾ ಡೇಸಾರವರು ಅಲ್ಲಿ ನೆರೆದಿದ್ದ ಸಹಪಾಠಿಗಳು ಹಾಗೂ ಅವರ ತಂದೆ ತಾಯಿಯವರ ಎದುರಲ್ಲೇ ನೀನು ಹಣವನ್ನು ತಾರದೆ ಇಲ್ಲಿ ಶೋ ಕೋಡಲು ಬಂದಿದ್ದೀಯಾ, ನಿನ್ನ ಅಪ್ಪ ಏನು ಅಂತ ಗೊತ್ತು. ನಿಮ್ಮ ನಾಟಕವನ್ನೆಲ್ಲ ನನ್ನ ಹತ್ತಿರ ತೋರಿಸಬೇಡಿ. ನಿನ್ನ ಅಪ್ಪ ಬರುವ ತನಕ ಹೊರಗೆ ನಡೆ ಎಂದು ವ್ಯಂಗ್ಯವಾಗಿ ಬೈದು ಅವಮಾನ ಮಾಡಿರುತ್ತಾರೆ ಎಂದು ಮನವಿಯಲ್ಲಿ ದೂರಲಾಗಿದೆ.
ಶಾಲಾ ಮುಖೋಪಾಧ್ಯಾಯಿನಿ ಪ್ರಿಯಾ ಡೇಸಾರವರು ನಡೆದುಕೊಂಡ ರೀತಿ ನಮ್ಮ ಸಂಸಾರವೇ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಿದಂತಾಗಿದೆ. ಅಲ್ಲದೆ ಟಿಸಿ ಸಿಗದೆ ನನ್ನ ಮಗಳ ವಿದ್ಯಾಭ್ಯಾಸವು ಕುಂಠಿತಗೊಳ್ಳುವ ಸಾಧ್ಯತೆ ಇರುವುದರಿಂದ ನಮಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಕೇಳಿಕೊಂಡಿದ್ದಾರೆ. ಹಾಗೂ ಶಾಲಾ ಮುಖೋಪಾಧ್ಯಾಯಿನಿ ಮೇಲೆ ಸೂಕ್ತ ಕ್ರಮ ಕೈಗೊಳ್ಳ ಬೇಕು ಎಂದು ಕೇಳಿಕೊಂಡಿದ್ದಾರೆ.