ನಾಸಿಕ್ : ಈಗಾಗಲೇ ವಾಹನಗಳ ಹಾರ್ನ್ ಗೆ ಕೇಂದ್ರ ಸರ್ಕಾರವು ಸಂಗೀತ ವಾದ್ಯಗಳ ಶಬ್ದವನ್ನು ಅಳವಡಿಸಲು ನಿರ್ಧಾರ ಕೈಗೊಂಡಿದ್ದು, ವಾಹನಗಳ ಹಾರ್ನ್ ಗೆ ಭಾರತೀಯ ಸಂಗೀತ ವಾದ್ಯಗಳ ಶಬ್ದವನ್ನು ಮಾತ್ರ ಅಳವಡಿಸಿಕೊಳ್ಳಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಕೊಳಲು, ತಬಲಾ, ವಯೋಲಿನ್, ಹಾರ್ಮೋನಿಯಂ, ಹಾರ್ಮೋನಿಕಾ ಮುಂತಾದ ಭಾರತೀಯ ಸಂಗೀತ ಸಾಧನಗಳನ್ನು ಮಾತ್ರ ಬಳಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ. ವಾಹನಗಳ ಹಾರ್ನ್ ಗೆ ಕೇವಲ ಭಾರತೀಯ ಸಂಗೀತ ವಾದ್ಯಗಳ ಶಬ್ದ ಅಳವಡಿಸಿಕೊಳ್ಳಲು ಶೀಘ್ರವೇ ಕಾನೂನು ತರಲಾಗುತ್ತದೆ ಎಂದು ಗಡ್ಕರಿ ಹೇಳಿದ್ದಾರೆ.
ಇನ್ನು ಪೊಲೀಸರು ಮತ್ತು ರಾಜಕೀಯ ವ್ಯಕ್ತಿಗಳು ಬಳಸುವ ಕಾರುಗಳ ಮೇಲೆ ಅಳವಡಿಸುವ ಕೆಂಪು ದೀಪವನ್ನು ಕೂಡಾ ತೆಗೆದುಹಾಕಲಾಗುತ್ತದೆ ಎಂದು ತಿಳಿಸಿದ್ದು, ಜೊತೆಗೆ ಪೊಲೀಸ್ ವಾಹನಗಳು, ಆಂಬುಲೆನ್ಸ್ ಬಳಸುವ ಸೈರನ್ ಗಳ ಬಗ್ಗೆಯೂ ಅಧ್ಯಯನ ಮಾಡಲಾಗಿದ್ದು, ಈಗಿರುವ ಶಬ್ದಕ್ಕೆ ಬದಲಾಗಿ ಆಲ್ ಇಂಡಿಯಾ ರೇಡಿಯೋದಲ್ಲಿ ಬರುವ ಟ್ಯೂನ್ ಅನ್ನು ಬಳಸುವ ಬಗ್ಗೆ ಚಿಂತನೆಯೂ ನಡೆದಿದೆ.