ಮಂಗಳೂರು: ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾದ ವಕ್ತಾರ ಶಿವಶಂಕರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕೇಂದ್ರ ಸರ್ಕಾರದ ಜನ್ಧನ್, ಉಜ್ವಲಾದಂತಹ ಯೋಜನೆಗಳಿಂದ ಬಡಜನರ ಜೀವನಮಟ್ಟ ಸುಧಾರಿಸಿದೆ. ಹೀಗೆ ಜಗತ್ತಿನಲ್ಲಿ ಭಾರತ ನಂಬರ್ ವನ್ ಸ್ಥಾನಕ್ಕೇರಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಬರಬೇಕಿದೆ’ ಎಂದು ಹೇಳಿದರು.
‘ಕೇಂದ್ರ ಪೂರೈಸುವ ಅಕ್ಕಿಯನ್ನು ಹಂಚುತ್ತಿರುವ ರಾಜ್ಯ ಸರ್ಕಾರ ಅನ್ನಭಾಗ್ಯ ತನ್ನದೇ ಯೋಜನೆ ಎನ್ನುತ್ತಿದೆ. ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟ ₹11,500 ಕೋಟಿ ಅನುದಾನವನ್ನು ವಿನಿಯೋಗಿಸಿದೆ. ಪಕ್ಷವು ಮೈಸೂರಿನ ರಾಜವಂಶಸ್ಥರಿಂದ ಹಿಡಿದು ಸರಳ ಸಜ್ಜನ ಕೋಟ ಶ್ರೀನಿವಾಸ ಪೂಜಾರಿ ಅವರಂತಹವರಿಗೂ ಟಿಕೆಟ್ ನೀಡಿದೆ. ಚಿತ್ರದುರ್ಗ ಮೀಸಲು ಕ್ಷೇತ್ರದ ಟಿಕೆಟ್ ಹಂಚಿಕೆ ಬಿಕ್ಕಟ್ಟು ಶೀಘ್ರವೇ ಬಗೆಹರಿಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಎಸ್.ಸಿ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಬೆಳುವಾಯಿ, ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಕೋಟ್ಯಾನ್, ಚಂದ್ರಕಲಾ ಸಿ.ಕೆ, ಉಪಾಧ್ಯಕ್ಷ ಸದಾಶಿವ ನೆಲ್ಲಿಕಾರು ಹಾಗೂ ಕಾರ್ಯದರ್ಶಿ ವಿನಯ್ ಸಾಲ್ಯಾನ್ ಭಾಗವಹಿಸಿದ್ದರು.