ಮಂಗಳೂರು: ಮಂಗಳೂರಿನಲ್ಲಿ ಮರಳು ಮಾಫಿಯಾ ಮತ್ತೆ ಹೆಡೆ ಎತ್ತಿದೆ. ಮರಳು ಲಾರಿಯನ್ನು ಹಿಡಿಯಲು ಹೋದ ಮಂಗಳೂರು ಡಿಸಿಪಿ ಕಾರಿನ ಮೇಲೆಯೇ ದಂಧೆಕೋರರು ಮರಳು ಲಾರಿ ಹತ್ತಿಸಲು ಯತ್ನಿಸಿದ ಘಟನೆ ಮಂಗಳೂರಿನಲ್ಲಿ ತಡರಾತ್ರಿ ನಡೆದಿದೆ. ಜಿಲ್ಲೆಯಲ್ಲಿ ಮರಳು ಮಾಫಿಯಾ ಅವ್ಯಾಹತವಾಗಿ ನಡೆಯುತ್ತಿದ್ದು, ದಂಧೆಕೋರರಿಗೆ ಲಗಾಮು ಇಲ್ಲದಂತಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಮರಳು ಮಾಫಿಯಾ ಬಾಲ ಬಿಚ್ಚಿದೆ. ಸಿಆರ್ ಝೆಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ಅವಧಿ ಮುಗಿದರೂ ಮರಳು ದಂಧೆಕೋರರು ಕಾನೂನಿನ ಭಯವೇ ಇಲ್ಲದೇ ಮರಳು ದಂಧೆ ಮಾಡುತ್ತಿದ್ದಾರೆ.
ಮಂಗಳೂರು, ಉಳ್ಳಾಳ ಭಾಗದಲ್ಲಿ ದಂಧೆಕೋರರು ಅಕ್ಷರಶಃ ನದಿಯ ಒಡಲನ್ನೇ ಭಗೆದಿದ್ದು, ಕೋಟ್ಯಾಂತರ ರೂಪಾಯಿ ಮರಳು ದೋಚುತ್ತಿದ್ದಾರೆ. ಜನಪ್ರತಿನಿಧಿಗಳ ಕೃಪಾಕಟಾಕ್ಷದಿಂದ ಮರಳು ಮಾಫಿಯಾ ನಿರಾಂತಕವಾಗಿ ನಡೆಯುತ್ತಿದ್ದು, ಇದೀಗ ಮರಳು ಮಾಫಿಯಾ ವಿರುದ್ಧ ಮಂಗಳೂರು ಡಿಸಿಪಿ ಹರಿರಾಂ ಶಂಕರ್ ಏಕಾಂಗಿ ಹೋರಾಟಕ್ಕೆ ಧುಮುಕಿದ್ದಾರೆ.
ಕಳೆದ ತಡರಾತ್ರಿ ಹರಿರಾಂ ಶಂಕರ್ ಮಂಗಳೂರಿನ ಅಡ್ಯಾರ್ನಲ್ಲಿ ಮರಳು ಅಡ್ಡೆಯ ಮೇಲೆ ಏಕಾಂಗಿ ದಾಳಿ ಮಾಡಿದ್ದು, ಈ ವೇಳೆ ಮರಳು ತುಂಬಿದ ಲಾರಿ ತೆಗೆದುಕೊಂಡು ಹಲವರು ಪರಾರಿಯಾಗಿದ್ದಾರೆ.
ಈ ವೇಳೆ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆಗಿಳಿದ ಡಿಸಿಪಿ, ಲಾರಿಯನ್ನು ಸುಮಾರು 10 ಕಿ. ಮೀ. ಚೇಸ್ ಮಾಡಿದ್ದಾರೆ. ಈ ವೇಳೆ ಡಿಸಿಪಿ ಕಾರಿನ ಮೇಲೆಯೇ ಮರಳು ದಂಧೆಕೋರರು ಲಾರಿ ಹತ್ತಿಸಲು ಮುಂದಾಗಿದ್ದಾರೆ. ಆದರೂ ಛಲಬಿಡದ ಡಿಸಿಪಿ ಹರಿರಾಂ ಶಂಕರ್ ಮರಳು ದಂಧೆಕೋರರನ್ನು ಹಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರು ನಗರ ಹೊರವಲಯದ ಅಡ್ಯಾರ್ನಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಡಿಸಿಪಿ ಹರಿರಾಂ ಶಂಕರ್ಗೆ ತಡರಾತ್ರಿ ಮಾಹಿತಿ ಸಿಕ್ಕಿದ್ದು, ಕೂಡಲೇ ಡ್ರೈವರ್, ಗನ್ ಮ್ಯಾನ್ ಜೊತೆ ದಂಧೆ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ್ದಾರೆ.
ಡಿಸಿಪಿಯನ್ನು ಕಂಡು ಮರಳುಗಾರಿಕೆ ಮಾಡುತ್ತಿದ್ದವರು ಪರಾರಿಯಾಗಿದ್ದಾರೆ. ಈ ವೇಳೆ ಮರಳು ತುಂಬಿದ ಲಾರಿಯನ್ನು ಡಿಸಿಪಿ ಅಡ್ಡ ಹಾಕಲು ಯತ್ನಿಸಿದ ವೇಳೆ ತಪ್ಪಿಸಿಕೊಂಡಿದ್ದಾರೆ. ಫರಂಗಿಪೇಟೆಯಲ್ಲಿ ರಾತ್ರಿ ಕರ್ತವ್ಯದಲ್ಲಿದ್ದ ಪೊಲೀಸರು ಚೆಕ್ ಪೋಸ್ಟ್ ಹಾಕಿದರೂ ಚೆಕ್ ಪೋಸ್ಟ್ಗೆ ಡಿಕ್ಕಿ ಹೊಡೆದು ಲಾರಿ ಪರಾರಿಯಾಗಿದೆ.
ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಮಾಫಿಯಾ ಎಗ್ಗಿಲ್ಲದೇ ನಡೆಯುತ್ತಿದ್ದು, ದಂಧೆಕೋರರಿಗೆ ಕೆಲ ಬಿಜೆಪಿ ಶಾಸಕರೇ ನೆರವಾಗುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದೆ. ಮರಳು ಮಾಫಿಯಾದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ.ಗೆ ಜನರಿಂದ ನಿರಂತರ ದೂರುಗಳು ಬರುತ್ತಿವೆಯಾದರೂ ಆಳುವ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಸುಮ್ಮನಿರುವಂತೆ ಮಾಡಿದೆ.