ಬಂಟ್ವಾಳ: ಕಾಂತಾರ ಕನ್ನಡ ಸಿನಿಮಾದ ಗುಂಗು ಇನ್ನೂ ಇರುವಂತೆಯೇ ಈಗ ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದಲ್ಲಿ ನಡೆದ ಘಟನೆಯೊಂದು ಬೆಳಕಿಗೆ ಬರುತ್ತಿದೆ.
ಪೆರ್ನೆಯಲ್ಲಿ ಸಾಲು ಸಾಲಾಗಿ ನಡೆದ ದುರ್ಘಟನೆಗಳಿಂದ ಭಯಭೀತರಾಗಿದ್ದ ಕಾರಣ ಹುಡುಕಿ ಅಷ್ಟಮಂಗಲ ಪ್ರಶ್ನೆ ಇರಿಸಿದಾಗ ಸುಮಾರು 500 ವರ್ಷಗಳ ಹಿಂದೆ ಆರಾಧಿಸಲ್ಪಡುತ್ತಿದ್ದ ದೈವಗಳ ನಿರ್ಲಕ್ಷ್ಯವೇ ಕಾರಣ ಎಂಬ ಅಂಶ ತಿಳಿದುಬಂದಿದೆ.
ಗ್ರಾಮದಲ್ಲಿ ಅಸಹಜ ಸಾವು, ನಾಗರ ಹಾವುಗಳ ನಿರಂತರ ಮೃತ್ಯು, ಪೆರ್ನೆ ಗ್ಯಾಸ್ ದುರಂತದಲ್ಲಿ ಗ್ರಾಮದ 11 ಜನರ ಸಾವು ಸೇರಿದಂತೆ ಎಲ್ಲಾ ಘಟನೆಗಳನ್ನು ನೋಡಿ ಬೆಚ್ಚಿಬಿದ್ದಿದ್ದ ಜನರು ಕಾರಣ ಹುಡುಕಿ ಅಷ್ಟ ಮಂಗಲ ಪ್ರಶ್ನೆಯ ಮೊರೆ ಹೋಗಿದ್ದರು.
ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಗ್ರಾಮದ ಹಲವು ಸ್ಥಳಗಳಲ್ಲಿ ದೈವಕ್ಕೆ ಸಂಬಂಧಿಸಿದ ಮೂರ್ತಿ, ಕತ್ತಿಗಳು, ದೈವಸ್ಥಾನ ಪತ್ತೆಯಾಗಿವೆ. ಬಳಿಕ ದೈವ ಮತ್ತು ದೈವಸ್ಥಾನದ ಕುರುಹುಗಳು ಸಿಕ್ಕಿರುವ ಜಾಗದಲ್ಲೇ ದೈವಸ್ಥಾನ ಕಟ್ಟಲು ಗ್ರಾಮಸ್ಥರು ತಯಾರಿ ನಡೆಸಿದ್ದು, ಈಗಾಗಲೇ ಎಲ್ಲಾ ಕಾಮಗಾರಿಗಳು ಅಂತಿಮ ಹಂತದಲ್ಲಿವೆ.
2023ರ ಫೆಬ್ರವರಿ ತಿಂಗಳಿನಲ್ಲಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಸಿದ್ಧತೆ ನಡೆಸಲಾಗಿದ್ದು, ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಆರಂಭಗೊಂಡ ಬಳಿಕ ಗ್ರಾಮದಲ್ಲಿ ದುರಂತಗಳು ನಿಂತಿವೆ ಎಂದು ಹೇಳಲಾಗಿದೆ.