ಮಂಗಳೂರು: ಇಂದಿನಿಂದ ಕುದ್ರೋಳಿ ಕ್ಷೇತ್ರದಲ್ಲಿ ಮಂಗಳೂರು ದಸರಾ ಆರಂಭವಾಗಿದ್ದು, ಸಂಸದ ನಳಿನ್ ಕುಮಾರ್ ಕಟೀಲು ಗುರುವಾರ ಚಾಲನೆ ನೀಡಿದರು.

ಬೆಳಗ್ಗೆ 9ಕ್ಕೆ ಗುರುಪ್ರಾರ್ಥನೆಯೊಂದಿಗೆ ನವದುರ್ಗೆಯರ ಮತ್ತು ಶಾರದಾ ಪ್ರತಿಷ್ಠೆ ನಡೆಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅ.16ರವರೆಗೆ ನಡೆಯಲಿರುವ ನವರಾತ್ರಿ ಉತ್ಸವದ ಅಂಗವಾಗಿ ಕುದ್ರೋಳಿ ಕ್ಷೇತ್ರದಲ್ಲಿ ನವ ದುರ್ಗೆಯರು, ಗಣಪತಿ ಹಾಗೂ ಶಾರದಾ ಮಾತೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು.
ಇನ್ನು ಅ. 7ರಿಂದ 16ರವರೆಗೆ ಕೇಂದ್ರ ಮಾಜಿ ಸಚಿವ ಬಿ.ಜನಾರ್ದನಪೂಜಾರಿ ಅವರ ಮಾರ್ಗದರ್ಶನದಂತೆ “ನಮ್ಮ ದಸರಾ- ನಮ್ಮ ಸುರಕ್ಷೆ’ಘೋಷ ವಾಕ್ಯದಡಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ದಸರಾ ಹಿನ್ನೆಲೆಯಲ್ಲಿ ನಗರಾದ್ಯಂತ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ.ಕುದ್ರೋಳಿ-ಮಣ್ಣಗುಡ್ಡೆ -ಲೇಡಿಹಿಲ್ ವೃತ್ತ-ಲಾಲ್ಬಾಗ್ಜಂಕ್ಷನ್- ಪಿವಿಎಸ್-ನವಭಾರತ್ ವೃತ್ತ- ಹಂಪನಕಟ್ಟೆ- ಮೋಹಿನಿ ವಿಲಾಸ-ರಥಬೀದಿ-ನ್ಯೂಚಿತ್ರ ಚಿತ್ರಮಂದಿರ-ಕುದ್ರೋಳಿ ದೇವಸ್ಥಾನ ಸಹಿತ ಸುಮಾರು 6 ಕಿ.ಮೀ. ನಷ್ಟು ಉದ್ದದ ರಸ್ತೆಗೆ 11 ದಿನಗಳ ಅವಧಿಗೆ ಮನಪಾದಿಂದ ವಿಶೇಷ ದೀಪಾಲಂಕಾರ ಮಾಡಲಾಗಿದೆ. ಅದೇ ರೀತಿ, ಮಂಗಳಾದೇವಿ ದೇವಸ್ಥಾನದ ದಸರಾ ಉತ್ಸವ ಹಿನ್ನೆಯಲ್ಲಿಯೂ ಸುತ್ತಮುತ್ತ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಕೆಲವೊಂದು ಖಾಸಗಿ, ಸರಕಾರಿ ಕಟ್ಟಡಗಳಲ್ಲಿಯೂ ದೀಪಾಲಂಕಾರ ಅಳವಡಿಸಲಾಗಿದೆ.
ಇನ್ನು ಕುದ್ರೋಳಿ ಕ್ಷೇತ್ರದ ಅಂಗಣದಲ್ಲಿ ಮೂರ್ತಿಗಳ ಪ್ರದಕ್ಷಿಣೆ ನಡೆಸಿ ಬಳಿಕ ದಸರಾ ದರ್ಬಾರು ಮಂಟಪದಲ್ಲಿ ಮೂರ್ತಿಗಳ ಪ್ರತಿಷ್ಠಾಪನೆಯನ್ನು ಧಾರ್ಮಿಕ ವಿಧಿ ವಿಧಾನಗಳ ಮೂಲಕ ನಡೆಸಲಾಯಿತು.
ಈ ವೇಳೆ ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ಕ್ಷೇತ್ರಾಡಳಿತ ಸಮಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಮೂಡ ಅಧ್ಯಕ್ಷ ರವಿಶಂಕರ ಮಿಜಾರು, ಹರಿಕೃಷ್ಣ ಬಂಟ್ವಾಳ, ಶಶಿಧರ ಹೆಗ್ಡೆ, ಪದ್ಮ ರಾಜ್ ಮೊದಲಾದವರು ಉಪಸ್ಥಿತರಿದ್ದರು.