Monday, April 29, 2024
Homeಕರಾವಳಿಮುಂದಿನ 15 ದಿನಗಳಲ್ಲಿ ಕಮಿಷನರೇಟ್ ವ್ಯಾಪ್ತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕಲಿಕಾ ಕೇಂದ್ರ ಆರಂಭ; ಎನ್ ಶಶಿಕುಮಾರ್

ಮುಂದಿನ 15 ದಿನಗಳಲ್ಲಿ ಕಮಿಷನರೇಟ್ ವ್ಯಾಪ್ತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕಲಿಕಾ ಕೇಂದ್ರ ಆರಂಭ; ಎನ್ ಶಶಿಕುಮಾರ್

spot_img
- Advertisement -
- Advertisement -

ಬೆಳ್ತಂಗಡಿ: ಐಎಎಸ್, ಐಪಿಎಸ್ ತರಬೇತಿ ಎಂಬುದು ಶೋಕಿ ಅಲ್ಲ.ಈ ಪರೀಕ್ಷೆಯನ್ನು ಎದುರಿಸಲು ಉನ್ನತ ಅಂಕಗಳು ಬೇಡ, 60-70 ಶೇಕಡಾ ಅಂಕ ಪಡೆಯುವ ಸಾಮರ್ಥ್ಯವಿದ್ದು, 6-8 ಗಂಟೆ ಓದುವ ಗುರಿ ಇದ್ದರೆ, ದೂರದರ್ಶನ, ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಸಾಕಾಗುತ್ತದೆ ಎಂದು ಮಂಗಳೂರು ಕಮಿಷನರ್ ಎನ್ ಶಶಿಕುಮಾರ್ ಹೇಳಿದರು.

ಬೆಳ್ತಂಗಡಿ ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಸಭಾಭವನದಲ್ಲಿ ಇಂದು ನಡೆದ ಬೆಸ್ಟ್ ಫೌಂಡೇಷನ್ ಆಶ್ರಯದಲ್ಲಿ ಪತ್ರಿಕೆಗಳ ಸಹಕಾರದಿಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ಬಗ್ಗೆ ಉಚಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಪರೀಕ್ಷೆ ಅಥವಾ ಯಾವುದೇ ವಿದ್ಯಾಭ್ಯಾಸವೇ ಇರಲಿ ಅನಾವಶ್ಯಕವಾಗಿರುವುದನ್ನು ಹೆಚ್ಚು ಓದುವ ಬದಲು ಅಗತ್ಯವಿರುವುದನ್ನು ಮಾತ್ರ ನಿಖರವಾಗಿ ಓದಬೇಕು. ದ.ಕ ಜಿಲ್ಲೆಯವರು ಸರಕಾರಿ ಉದ್ಯೋಗ ಮತ್ತು ಸ್ಪರ್ಧಾತ್ಮಕ ಕ್ಷೇತ್ರಕ್ಕೆ ಕಡಿಮೆ ಹಾಜರಾಗುತ್ತಾರೆ. ಆ ನಿಟ್ಟಿನಲ್ಲಿ ಇಲ್ಲಿನ‌ ಯುವಜನತೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನಮ್ಮ ಕಮಿಷನರೇಟ್ ವ್ಯಾಪ್ತಿಯಲ್ಲಿ ಮುಂದಿನ 15 ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕಲಿಕಾ ಕೇಂದ್ರ ಆರಂಭ ಮಾಡಲಿದ್ದೇವೆ ಎಂದರು.

ವಿದೇಶಿ ಉದ್ಯೋಗದ ಕಡೆಗೆ ಹೆಚ್ಚಿನ ಒಲವು ತೋರಿಸುವ ಕರಾವಳಿ ಜಿಲ್ಲೆಯಲ್ಲಿ ಕೋವಿಡ್ ಕಾಲಘಟ್ಟದಲ್ಲಿ ಸರಕಾರಿ ಉದ್ಯೋಗದ ಕಡೆಗೆ ಒಲವು ಜಾಸ್ತಿಯಾಗಿದೆ.ಜಿಲ್ಲೆಯವರು ಕಳೆದ 11 ವರ್ಷದಲ್ಲಿ 4% ಮಾತ್ರ ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಭಾಗವಹಿಸಿರುವುದನ್ನು ಕಂಡು ಮೇಲಧಿಕಾರಿಗಳ ಜೊತೆ ಚರ್ಚಿಸಿ ತರಬೇತಿ ಆಯೋಜನೆ ಮಾಡಿದ್ದೆವು. ಅದರಲ್ಲಿ ಉತ್ತಮ‌ ಫಲಿತಾಂಶ ಕಂಡಿದೆ. ಒಂದು ವೇಳೆ ಈ ಜಿಲ್ಲೆಯವರು ತರಬೇತಿಯ ಪ್ರಯೋಜನ ಪಡೆದು ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಭಾಗಿಯಾದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶದಂತೆ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹೈಕೋರ್ಟ್ ವಕೀಲರೂ ಆಗಿರುವ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಮಾತನಾಡಿ, ತಾಲೂಕಿನ‌ ಇತಿಹಾಸ ತೆರೆದು ನೋಡಿದಾಗ ತಾಲೂಕಿನಿಂದ ಯಾರೊಬ್ಬರೂ ಐಎಎಸ್, ಐಪಿಎಸ್ ಆಗಿಲ್ಲ. ಈ ಕೆಲಸವನ್ನು ಮುಂದಿನ ನಾಲ್ಕೈದು ವರ್ಷಗಳಲ್ಲಿ ಬೆಸ್ಟ್ ಫೌಂಡೇಶನ್ ಮಾಡಿಯೇ ಮಾಡುತ್ತದೆ ಎಂದರು.

ಗ್ರಾಮಾಂತರ ಭಾಗದ ವಿದ್ಯಾರ್ಥಿಗಳು, ಸರಕಾರಿ ಶಾಲೆಯಲ್ಲಿ ಓದಿದವರು ಎಂಬ ಕೀಳರಿಮೆ ಬೇಕಾಗಿಲ್ಲ. ಎಲ್ಲಾ ಸಾಧನೆಗಳನ್ನು ಮಾಡಿದವರೆಲ್ಲರೂ ಇಂತಹದ್ದೇ ಮೂಲದಿಂದ ಬಂದವರು ಎಂಬುದು ಉಲ್ಲೇಖಾರ್ಹ ಎಂದರು.

ತಾಲೂಕಿನಲ್ಲಿ ಓಡಾಡಿದಾಗ ಅನೇಕ ವಿಚಾರಗಳನ್ನು ತಿಳಿಯಲು ಸಾಧ್ಯವಾಯಿತು. ನಮ್ಮಲ್ಲಿ ಮೀಸಲಾತಿ ಎಂಬುದು ಇನ್ನೂ ಕೆಲವರಿಗೆ ಅರಿವು ಇಲ್ಲ. ಮೀಸಲಾತಿ ಎಂಬುದು ದೌರ್ಬಲ್ಯ ಅಲ್ಲ. ಅದು ನಮ್ಮ ಹಕ್ಕು. ಅದನ್ನು ಬಳಸಿಕೊಂಡು ನಮ್ಮ ಉದ್ಯೋಗವನ್ನು ಕಸಿದುಕೊಳ್ಳಬೇಕು. ಮುಂದಕ್ಕೆ ಮೀಸಲಾತಿ ಬಗ್ಗೆಯೂ ಜಾಗೃತಿ ಮೂಡಿಸಲು ಮುಂದಕ್ಕೆ ಅರ್ಹ ಸಂಪನ್ಮೂಲ ವ್ಯಕ್ತಿಗಳಿಂದ ತರಗತಿ ದೊರೆಯುವಂತೆ ಮಾಡುತ್ತೇವೆ. ‌ಇದರಲ್ಲೂ ನೀವೆಲ್ಲಾ ಭಾಗಿಗಳಾಗಬೇಕು ಎಂದರು.

ತರಬೇತಿ, ಸ್ಕಾಲರ್‌ಶಿಪ್, ಅರ್ಥಿಕ ಸಮಸ್ಯೆಗಳಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ತಾಲೂಕಿನ ಜನರಿಗೆ ನಾವು ಬೆಸ್ಟ್ ಫೌಂಡೇಶನ್ ವತಿಯಿಂದ ಯೂತ್ ಹೆಲ್ಪ್‌ಲೈನ್ ಪ್ರಾರಂಭಿಸುತ್ತಿದ್ದೇವೆ. ಇದು ಸಂಪೂರ್ಣ ಯುವಜನತೆಗೆ ಅವಕಾಶ. ಇದಕ್ಕೆ ನೀವು ಕರೆ ಮಾಡಬಹುದು ಎಂದರು.

ಕರಾವಳಿಯ ಮಣ್ಣು ಐದು ಬ್ಯಾಂಕ್‌ಗಳನ್ನು ಪರಿಚಯಿಸಿದ ಮಣ್ಣು. ಒಂದು ಕಾಲದಲ್ಲಿ ದೇಶದ ಎಲ್ಲೇ ಹೋದರೂ ತುಳು, ಕೊಂಕಣಿ ಮಾತನಾಡುವವರು ಸಿಗುತ್ತಿದ್ದರು. ಇಂದು ಆ ಜಾಗವನ್ನು ಅನ್ಯ ಭಾಷಿಗರು ಮುತ್ತಿಕೊಂಡಿದ್ದಾರೆ. ಇದು ತಪ್ಪಲ್ಲ‌. ಆ ಕ್ಷೇತ್ರದಲ್ಲೂ ನಮ್ಮವರನ್ನು ಸಿದ್ಧಗೊಳಿಸುವ ಉದ್ದೇಶದಿಂದ ಬ್ಯಾಂಕಿಂಗ್ ತರಬೇತಿಯನ್ನು ಆಯೋಜಿಸಲಿದ್ದೇವೆ ಎಂದರು.

ಕಾರ್ಯಕ್ರಮಕ್ಕೆ ಸಹಯೋಗ ನೀಡಿದ ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿ ಪತ್ರಿಕೆಯ ಪ್ರಸಾರ ವಿಭಾಗದ ಮುಖ್ಯಸ್ಥ ಪ್ರಕಾಶ್ ನಾಯಕ್, ಉಜಿರೆ ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.‌ಬಿ.ಎ ಕುಮಾರ್ ಹೆಗ್ಡೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಕುಮಾರ್ ಹೆಗ್ಡೆ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಬೆಸ್ಟ್ ಫೌಂಡೇಶನ್ ಸಲಹೆಗಾರ ನಾಮದೇವ ರಾವ್ ಮುಂಡಾಜೆ ಸ್ವಾಗತಿಸಿದರು. ಸೌಜನ್ಯಾ ‘ಕಟ್ಟುತ್ತೇವಾ’ ಎಂಬ ಧ್ಯೇಯಗೀತೆ ಹಾಡಿದರು. ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರೂಪಿಸಿದರು.

- Advertisement -
spot_img

Latest News

error: Content is protected !!