ಕರ್ನಾಟಕದ ಅತ್ಯಂತದ ಎತ್ತರದ ಬೆಟ್ಟ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಬೆಟ್ಟಕ್ಕೆ ‘ರೋಪ್ ವೇ’ ನಿರ್ಮಿಸುವ ಯೋಜನೆಯ ಪ್ರಸ್ತಾಪವನ್ನು ಕೈ ಬಿಡುವಂತೆ ಪರಿಸರವಾದಿಗಳು ಪಟ್ಟು ಹಿಡಿದಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿಯೂ ಈ ಹಿಂದೆ ‘ರೋಪ್ ವೇ’ ಯೋಜನೆಯನ್ನು ಪ್ರಸ್ತಾಪಿಸಿದ್ದು, ಹೋರಾಟಗಾರರ ತೀವ್ರ ಪ್ರತಿರೋಧದ ಹಿನ್ನೆಲೆಯಲ್ಲಿ ಈ ಪ್ರಸ್ತಾವನೆಯನ್ನು ಸರ್ಕಾರ ರದ್ದುಗೊಳಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಚಿಕ್ಕಮಗಳೂರಿನಲ್ಲಿಯೂ ‘ರೋಪ್ ವೇ’ ನಿರ್ಮಾಣದ ಪ್ರಸ್ತಾಪವನ್ನು ಕೈಬಿಡುವಂತೆ ಪರಿಸರವಾದಿಗಳು ಒತ್ತಾಯಿಸಿದ್ದಾರೆ.
‘ಮುಳ್ಳಯ್ಯನಗಿರಿ ಬೆಟ್ಟ’ವು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ‘ಪರಿಸರ-ಸೂಕ್ಷ್ಮ ಪ್ರದೇಶ’ (ಇಎಸ್ಎ) ಕರಡಿನಡಿಯಲ್ಲಿ ಬರುತ್ತದೆ. ಇಲ್ಲಿ ‘ರೋಪ್ ವೇ’ ನಿರ್ಮಿಸುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಪರಿಸರ ಹೋರಾಟಗಾರರು ಹೇಳಿದ್ದಾರೆ. ಅಷ್ಟೇ ಅಲ್ಲದೇ “ಚಾಮುಂಡಿ ಬೆಟ್ಟ ಮತ್ತು ಮುಳ್ಳಯ್ಯನಗಿರಿ ಬೆಟ್ಟವು ದೇಶದಲ್ಲೆ ಅತ್ಯಂತ ಸುಂದರ ಪ್ರವಾಸಿ ತಾಣವಾಗಿದೆ. ಇಂತಹ ಪ್ರವಾಸಿ ತಾಣಗಳು ಮೂಲಸೌಕರ್ಯಗಳ ಕೊರತೆಯಿಂದ ಹೆಚ್ಚು ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫಲವಾಗಿವೆ ಎಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತಮ್ಮ ಚೊಚ್ಚಲ ಬಜೆಟ್ನಲ್ಲಿ ಈ ಎರಡೂ ಬೆಟ್ಟದಲ್ಲಿ ‘ರೋಪ್ ವೇ’ ನಿರ್ಮಿಸುವ ಪ್ರಸ್ತಾಪ ಮಂಡಿಸಿದ್ದರು. ಅಲ್ಲದೆ, ಕೇಂದ್ರ ಸರ್ಕಾರದ ‘ಪರ್ವತ ಮಾಲಾ’ ಯೋಜನೆಯಡಿ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಘೋಷಿಸಿದ್ದರು. ಈ ಪ್ರಸ್ತಾಪ ಪರಿಸರವಾದಿಗಳ ಕಂಗೆಣ್ಣಿಗೆ ಕಾರಣವಾಗಿದೆ.
ಇನ್ನು “ಸರ್ಕಾರ ಪ್ರಸ್ತಾಪ ಮಾಡಿರುವ ಯೋಜನೆ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಬರುತ್ತದೆ. ಈ ಪ್ರದೇಶದಲ್ಲಿ ಇಂತಹ ಯಾವುದೇ ಯೋಜನೆಗಳನ್ನು ತರುವುದು ಕಾನೂನಿನ ಉಲ್ಲಂಘನೆಯಾಗುತ್ತದೆ. ಸಾಮಾನ್ಯ ಜ್ಞಾನವಿರುವವರು ಇಂತಹ ಪ್ರಸ್ತಾಪ ಮಾಡುವುದಿಲ್ಲ. ಉತ್ತರ ಕನ್ನಡದ ‘ಯಾಣ’ದಲ್ಲೂ ಇಂತಹ ಪ್ರಯೋಗ ನಡೆಸಲು ಮುಂದಾಗಿದ್ದಾರೆ. ಯಾಣ ಕೂಡ ಪರಿಸರ ಸೂಕ್ಷ್ಮ ಪ್ರದೇಶವಾಗಿದೆ.
ಪರಿಸರ ಹೋರಾಟಗಾರ ಜೋಸೆಫ್ ಹೂವ್ ಈ ಕುರಿತು, ಎರಡು ಪ್ರದೇಶದಲ್ಲಿ ಯೋಜನೆ ಪ್ರಸ್ತಾಪವನ್ನು ಕೈಬಿಡಬೇಕು. ಮುಳ್ಳಯ್ಯನಗಿರಿ ಬೆಟ್ಟದ ಪರಿಸರ ವ್ಯವಸ್ಥೆಯು ದುರ್ಬಲವಾಗಿದೆ. ಈ ಪ್ರದೇಶದಲ್ಲಿ ಭೂಕುಸಿತಗಳು ಆಗಾಗ್ಗೆ ವರದಿಯಾಗುತ್ತವೆ. ಈ ಪ್ರದೇಶವು ಅಂತಹ ಯಾವುದೇ ಯೋಜನೆಗಳಿಗೆ ಸರಿಹೊಂದುವುದಿಲ್ಲವೆಂದು ಜೋಸೆಫ್ ತಿಳಿಸಿದ್ದಾರೆಂದು ‘ಟೈಮ್ಸ್ ಆಫ್ ಇಂಡಿಯಾ’ ಉಲ್ಲೇಖಿಸಿದೆ..
ಇನ್ನ ಚಾಮುಂಡಿ ಬೆಟ್ಟಕ್ಕೆ ಹೋಲಿಸಿದರೆ ಮುಳ್ಳಯ್ಯನಗಿರಿ ಬೆಟ್ಟ ಹೆಚ್ಚು ಸೂಕ್ಷ್ಮ ಪ್ರದೇಶವಾಗಿದೆ. ಹುಲಿ ಸೇರಿದಂತೆ ಅಳಿವಿನಂಚಿನಲ್ಲಿರುವ ಹಲವಾರು ಕಾಡು ಪ್ರಾಣಿಗಳ ಆವಾಸಸ್ಥಾನವಾಗಿದೆ. ಈ ಪ್ರದೇಶದಲ್ಲಿ ‘ರೋಪ್ ವೇ’ ನಿರ್ಮಿಸಬೇಕೆಂಬ ಯಾವ ಬೇಡಿಕೆಯೂ ಇಲ್ಲವೆಂದು ಚಿಕ್ಕಮಗಳೂರಿನ ವನ್ಯಜೀವಿ ವಾರ್ಡನ್ ಜಿ ವೀರೇಶ್ ಹೇಳಿದ್ದಾರೆ.
ಚಿಕ್ಕಮಗಳೂರು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್, ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ಇದುವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.