ಉಡುಪಿ: ಖಾಸಗಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಬೇಡಿಕೆಗೆ ನಮ್ಮ ಸಹಮತ ಇದೆ ಎಂದು ಖಾಸಗಿ ಬಸ್ ಮಾಲಕರ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಉಡುಪಿಯಲ್ಲಿ ಇಂದು ಹೇಳಿಕೆ ನೀಡಿರುವ ಕುಯಿಲಾಡಿ ಸುರೇಶ್ ನಾಯಕ್, ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ನಮ್ಮ ಸಹಮತ ಇದೆ ಎಂದಿದ್ದಾರೆ.
ಕರಾವಳಿ ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ಖಾಸಗಿ ಬಸ್ ಸಂಚಾರ ಇದ್ದು, ಸರ್ಕಾರಿ ಬಸ್ಸುಗಳಿಗೆ ಕೊಡುವ ಅನುಕೂಲ ಖಾಸಗಿ ಬಸ್ಸುಗಳಿಗೂ ನೀಡಿ, ಹಣದ ರೂಪದಲ್ಲಿ ಅಲ್ಲವಾದರೂ ತೆರಿಗೆ ವಿನಾಯಿತಿ, ಡೀಸೆಲ್ ಸಬ್ಸಿಡಿ ರೂಪದಲ್ಲಿ ಕೊಟ್ಟು, ನಮಗೆ ಆಗುವ ಹೊರೆಯನ್ನು ತುಂಬಿಸಿಕೊಟ್ಟರೆ ಉಚಿತ ಪ್ರಯಾಣಕ್ಕೆ ನಾವು ಸಿದ್ಧ ಎಂದು ಸುರೇಶ್ ನಾಯಕ್ ಹೇಳಿದ್ದಾರೆ.
ಕೆಎಸ್ಆರ್ಟಿಸಿಗೆ ಅನುಸರಿಸುವ ಮಾನದಂಡ ನಮಗೂ ಅನುಸರಿಸಿದರೆ ಉಚಿತವಾಗಿ ವ್ಯವಸ್ಥೆ ಕಲ್ಪಿಸಲು ನಾವು ತಯಾರಿದ್ದೇವೆ ಎಂದು ಹೇಳಿರುವ ಕುಯಿಲಾಡಿ ಸುರೇಶ್ ನಾಯಕ್, ಡೀಸೆಲ್ ದರ ಹೆಚ್ಚಳ ಆಗುವ ಆತಂಕವೂ ಇದ್ದು, ಆರು ವರ್ಷಗಳಿಂದ ಬಸ್ ದರ ಹೆಚ್ಚಳ ಆಗದ ಕಾರಣ ಎಲ್ಲವನ್ನೂ ಜನರ ತಲೆಯ ಮೇಲೆ ಹಾಕುವ ಅಪಾಯ ಇದೆ ಎಂದು ಹೇಳಿದ್ದಾರೆ.