ಮಂಗಳೂರು: ನಂಬರ್ ಪ್ಲೇಟ್ ಸರಿಯಿಲ್ಲದ ಮತ್ತು ಐಎನ್ಡಿ ಹೊಂದಿರದ ವಾಹನಗಳನ್ನು ಹಿಡಿಯುತ್ತಿದ್ದ ಎಸಿಪಿ ನಟರಾಜ್ ವಾಹನದ ನಂಬರ್ ಪ್ಲೇಟ್ನಲ್ಲಿ ಐಎನ್ಡಿ ಇರದಿರುವುದು ಬೆಳಕಿಗೆ ಬಂದಿದ್ದು,ಸಾರ್ವಜನಿಕರು ವಾಹನದ ಫೋಟೋ ತೆಗೆದು ಸಾಮಾಜಿಕ ಜಾಲಾತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.
ಸಾರ್ವಜನಿಕರನ್ನು ಹಿಡಿದು ದಂಡ ವಸೂಲಿ ಮಾಡುತ್ತಿದ್ದ ಪೊಲೀಸರ ವಾಹನದಲ್ಲೇ ನಿಯಮ ಬಾಹಿರ ನಂಬರ್ ಪ್ಲೇಟ್ ಇರುವ ಬಗ್ಗೆ ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. ಆಟೋ, ಬೈಕ್ಗಳಲ್ಲಿ ಪ್ರಯಾಣಿಸುವ ಸಾಮಾನ್ಯರನ್ನು ಹಿಡಿದು ಕೇಸ್ ಹಾಕುವ ಪೊಲೀಸರು, ತಮ್ಮ ವಾಹನದಲ್ಲೇ ಸರಿಯಾಗಿ ನಿಯಮ ಅಳವಡಿಸಿಲ್ಲ. ಪೊಲೀಸರಿಗೆ ಕೇಸ್ ಹಾಕುವವರು ಯಾರು?, ಎಂದು ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, ಎಸಿಪಿ ವಾಹನದ ನಂಬರ್ ಪ್ಲೇಟ್ ನಿಯಮ ಬಾಹಿರವಾಗಿರುವುದು ಗೊತ್ತಾಗಿದೆ. ತಕ್ಷಣ ಸರಿ ಮಾಡಲು ಸೂಚಿಸಿದ್ದೇನೆ, ಎಂದು ತಿಳಿಸಿದ್ದಾರೆ.
ಇನ್ನು ಬುಧವಾರ ಹೆಲ್ಮೆಟ್ ಹಾಕದಿರುವವರ ಬಗ್ಗೆ ಪೊಲೀಸರು ಕಾರ್ಯಾಚರಣೆ ಮಾಡಿದರೆ, ಗುರುವಾರ ಇನ್ಶುರೆನ್ಸ್ ಹೊಂದಿರದ ವಾಹನಗಳ ಮೇಲೆ ಪೊಲೀಸರು ಕಾರ್ಯಾಚರಣೆ ಮಾಡಲಿದ್ದಾರೆ. ಶುಕ್ರವಾರ ಹಳೇ ಕೇಸ್ಗಳ ದಂಡ ಕಟ್ಟಿಸಿಕೊಳ್ಳಲು ಪೊಲೀಸರು ತಯಾರಾದರೆ, ಶನಿವಾರ ಎಮಿಶನ್ ಸರ್ಟಿಫಿಕೇಟ್ ಇಲ್ಲದ ವಾಹನಗಳನ್ನು ಹಿಡಿಯುವ ಕಾರ್ಯಾಚರಣೆಯನ್ನು ಪೊಲೀಸರು ಮಾಡಲಿದ್ದಾರೆ. ಈ ಎಲ್ಲಾ ಕಾರ್ಯಾಚರಣೆ ಮಂಗಳೂರು ಸಂಚಾರ ವಿಭಾಗದ ಎಸಿಪಿ ಎಂ.ಎ. ನಟರಾಜ್ ನೇತೃತ್ವದಲ್ಲಿ ನಡೆಯಲಿದೆ.