ಮಂಗಳೂರು: ಬೈಕ್ ಅಡವಿಟ್ಟು ಅಕ್ರಮ ಹಣ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕದ್ರಿ ಠಾಣೆಯಲ್ಲಿ ನಾಲ್ಕು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಬಲ್ಮಠ ನಿವಾಸಿ ಸಾಗರ್ ಶ್ಯಾಮ್ (40), ಮಂಜೇಶ್ವರ ನಿವಾಸಿಗಳಾದ ಸುಜಿತ್ (30), ಮನೀಷ್ (30), ಶೈನಿ (50) ವಿರುದ್ಧ ದೂರು ದಾಖಲಾಗಿದೆ.
ನಿರ್ಮಲ್ ಕುಮಾರ್ ಎಸ್. ಭಂಡಾರಿ ಎಂಬವರು ಹಣದ ಅವಶ್ಯಕತೆಯಿದ್ದ ಕಾರಣ 2.70 ಲಕ್ಷ ರೂ. ಮೌಲ್ಯದ ಬೈಕನ್ನು ನಗರದ ಬಲ್ಮಠದ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿರುವ ಸಾಗರ್ ಶ್ಯಾಮ್ನಿಗೆ 30 ಸಾವಿರ ರೂ.ಗೆ ಅಡಮಾನವಿರಿಸಿ ಸಾಲ ಪಡೆದಿದ್ದರು. ಬಳಿಕ ನಿರ್ಮಲ್ ಕುಮಾರ್ ಸಾಲವನ್ನು ಮರುಪಾವತಿಸಿದರೂ ಸಾಗರ್ ಶ್ಯಾಮ್, ಸುಜಿತ್, ಮನೀಶ್ ಎಂಬವರೊಂದಿಗೆ ಸೇರಿ ಮೋಸ ಮಾಡುವ ಉದ್ದೇಶದಿಂದ ಸಹಿ ನಕಲು ಮಾಡಿ ಆರ್ಸಿಯನ್ನು 3ನೇ ಆರೋಪಿ ಮನೀಶ್ಗೆ ಅಕ್ರಮವಾಗಿ ವರ್ಗಾಯಿಸಿದ್ದಾರೆ. ಈ ಕೃತ್ಯಕ್ಕೆ ಶೈನಿ ಎಂಬ ಮಹಿಳೆ ಸಹಕರಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಮಂಗಳೂರು 2ನೇ ಹೆಚ್ಚುವರಿ ಸಿವಿಲ್ ಮತ್ತು ಸಿಜೆಎಂ ನ್ಯಾಯಾಲಯದಿಂದ ಬಂದ ಖಾಸಗಿ ದೂರಿನಂತೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ