ಪುತ್ತೂರು; ಅಕ್ರಮವಾಗಿ ಗೋ ಸಾಗಾಟ ಮಾಡುವಾಗ ವಾಹನ ಕೈಕೊಟ್ಟು ಗೋವುಗಳನ್ನು ಬಿಟ್ಟು ಪರಾರಿಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದಿನಾಂಕ: 29-11-2025 ರಂದು ಬೆಳಗ್ಗೆ, ಯಾರೋ ಕಳ್ಳರು ವಾಹನವೊಂದರಲ್ಲಿ ಗೋವುಗಳನ್ನು ಸಾಗಿಸುವ ವೇಳೆಯಲ್ಲಿ, ಸದ್ರಿ ವಾಹನ ರಸ್ತೆಯಲ್ಲಿ ಕೆಟ್ಟುಹೋಗಿರುವುದರಿಂದ, ವಾಹನದಲ್ಲಿದ್ದ ಗೋವುಗಳನ್ನು ಪುತ್ತೂರು, ನರಿಮೊಗರು ಎಂಬಲ್ಲಿ ನಡುರಸ್ತೆಯಲ್ಲಿ ಬಿಟ್ಟು ಹೋಗಿದ್ದರು. ಈ ಬಗ್ಗೆ ಪುತ್ತೂರು ಪಾಣಾಜೆ ನಿವಾಸಿ ಪ್ರೇಮ್ರಾಜ್ ಎಂಬವರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದರು. ಗೋವುಗಳನ್ನು ಸ್ಥಳೀಯರ ಸಹಕಾರದಿಂದ ಪುತ್ತೂರು ನಗರ ಠಾಣೆಗೆ ಹಸ್ತಾಂತರಿಸಿದ್ದರು.
ಅದರಂತೆ ಪ್ರಕರಣದ ತನಿಖೆ ನಡೆಸಿದ ಪುತ್ತೂರು ನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳ್ಳಾಲ ಸಜಿಪನಡು ನಿವಾಸಿಗಳಾದ ಆಶಿಕ್ ಪಾಷಾ (26) ಹಾಗೂ ಅಬ್ದುಲ್ ಲತೀಫ್ (25) ಬಂಧಿತರು. ಆರೋಪಿಗಳು ಕೆಎ 52 4889 ನೋಂದಣಿಯ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ 4 ಕರುಗಳನ್ನು ಹಾಗೂ ಒಂದು ದನವನ್ನು ಸಾಗಿಸುವ ವೇಳೆ ವಾಹನ ದುರಸ್ತಿಗೀಡಾದ್ದರಿಂದ, ಆರೋಪಿಗಳು ಜಾನುವಾರುಗಳನ್ನು ರಸ್ತೆಯಲ್ಲಿ ಬಿಟ್ಟು ವಾಹನದೊಂದಿಗೆ ತೆರಳಿದ್ದರು. ಸದ್ಯ ಆರೋಪಿಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಇನ್ನೋವಾ ಕಾರನ್ನು ವಶಕ್ಕೆ ಪಡೆದು, ಆರೋಪಿಗಳನ್ನು ನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.


