ಮಂಗಳೂರು: ಮುಂಬೈಯಿಂದ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದ ಮೂಲಕ ಕೇರಳಕ್ಕೆ ನಗದು ಮತ್ತು ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣದ ತನಿಖೆಯನ್ನು ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಲು ನ್ಯಾಯಾಲಯ ಆದೇಶಿಸಿದೆ.
ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಇನ್ಸ್ಟೆಕ್ಟರ್ ಮೋಹನ್ ಕೊಟ್ಟಾರಿ ನೇತೃತ್ವದ ರೈಲ್ವೆ ಪೊಲೀಸರು ಮತ್ತು ಆರ್ಪಿಎಫ್ ಪೊಲೀಸರು ರವಿವಾರ ಜಂಟಿ ಕಾರ್ಯಾಚರಣೆ ನಡೆಸಿ ರಾಜಸ್ಥಾನ ಮೂಲದ ಮಹೇಂದ್ರ ಸಿಂಗ್ (35) ಎಂಬಾತನನ್ನು ಬಂಧಿಸಿದ್ದರು.
ಅಲ್ಲದೆ ಸೂಕ್ತ ದಾಖಲೆಪತ್ರಗಳಿಲ್ಲ 1.48 ಕೋ.ರೂ. ನಗದು ಮತ್ತು 40 ಲ.ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಯ ಸುಪರ್ದಿಗೆ ವಹಿಸಲು ನ್ಯಾಯಾಲಯವು ಆದೇಶಿಸಿದೆ.
ಮಹೇಂದ್ರ ಸಿಂಗ್ ಕಲ್ಲಿಕೋಟೆಯ ಜ್ಯುವೆಲ್ಲರಿ ಅಂಗಡಿ ಹೊಂದಿರುವ ತನ್ನ ಸಂಬಂಧಿಗೆ ಹಣ ಮತ್ತು ಚಿನ್ನವನ್ನು ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ. ಈ ಜ್ಯುವೆಲ್ಲರಿ ಅಂಗಡಿಗೆ ಸಂಬಂಧಿಸಿದ ಕಚೇರಿ ಮುಂಬೈನಲ್ಲಿದ್ದು ಅಲ್ಲಿಂದ ಹಣ ಮತ್ತು ಚಿನ್ನವನ್ನಾ ಸಾಗಾಟ ಮಾಡಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಇದೀಗ ಆದಾಯ ತೆರಿಗೆ ಇಲಾಖೆಯವರು ಮಹೇಂದ್ರ ಸಿಂಗ್ ಮತ್ತು ಆತನ ಸಂಬಂಧಿ ಜ್ಯುವೆಲ್ಲರಿ ಅಂಗಡಿಯ ಮಾಲಕನನ್ನು ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.