ಮುರುಡೇಶ್ವರದ ತೇರ್ನಾಮಕ್ಕಿಯಲ್ಲಿ ಕೌಟುಂಬಿಕ ಕಲಹದಿಂದ ಗಂಡ ಹೆಂಡತಿಯನ್ನು ಹತ್ಯೆ ಮಾಡಿದ ಘಟನೆ ನಡೆದಿದೆ.
ನಂದಿನಿ(30) ಕೊಲೆಯಾದ ಮಹಿಳೆ. ಆರೋಪಿ ಲೋಕೇಶ್ ನಾಯ್ಕ.
ಗಂಡ ಹೆಂಡತಿಯ ನಡುವಿನ ಕೌಟುಂಬಿಕ ಕಲಹವೇ ಈ ಹತ್ಯೆಗೆ ಮುಖ್ಯ ಕಾರಣ ಎನ್ನಲಾಗಿದೆ. ನಂದಿನಿ ಹಾಗೂ ಲೋಕೇಶ್ ನಾಯ್ಕ ದಂಪತಿ ಓರ್ವ ಪುತ್ರ ಹಾಗೂ ಮಗಳೊಂದಿಗೆ ಕಳೆದ ಮೂರು ದಿನಗಳ ಹಿಂದಷ್ಟೇ ಸಬ್ಬತ್ತಿ ಕ್ರಾಸ್ನಲ್ಲಿರುವ ಬಾಡಿಗೆ ಮನೆಗೆ ಬಂದು ವಾಸವಾಗಿದ್ದರು. ದಂಪತಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿದ್ದು ಈ ವೇಳೆ ಕೋಪಗೊಂಡ ಲೋಕೇಶ್ ನಂದಿನಿಯ ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ನಂದಿನಿ ರಕ್ತದ ಮಡುವಿನಲ್ಲೇ ಮನೆಯಿಂದ ಹೊರಗೆ ಓಡಿಬಂದು ನೆಲಕ್ಕೆ ಬಿದ್ದು ಪ್ರಾಣಬಿಟ್ಟಿದ್ದಾಳೆ.
ಸ್ಥಳೀಯರು ರಕ್ತದ ಮಡುವಿನಲ್ಲಿ ಬಿದ್ದ ಮಹಿಳೆಯನ್ನು ನೋಡಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ದಂಪತಿಗಳ ಈ ಘಟನೆಯಿಂದ ಎರಡು ಮಕ್ಕಳು ಇದೀಗ ಅನಾಥವಾಗಿವೆ ಮಾಹಿತಿ ಪಡೆದ ಸಿಪಿಐ ಸಂತೋಷ ಕಾಯ್ಕಿಣಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಬಳಿಕ ಆರೋಪಿ ಪತಿ ಲೋಕೇಶ ನಾಯ್ಕನನ್ನು ಖಾಸಗಿ ಹೋಟೆಲೊಂದರಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಪ್ರಕರಣದ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.