ಬೆಳ್ತಂಗಡಿ : ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿ ಕಳೆದ 10 ವರ್ಷಗಳಿಂದ ಗಂಡನ ಜೊತೆ ಸಂಸಾರ ಮಾಡಿಕೊಂಡಿದ್ದ ಮಹಿಳೆಯೊಬ್ಬರಿಗೆ ಪತಿ ಮಹಾಶಯ ಅಮಲು ಪದಾರ್ಥ ಸೇವಿಸಿ ಹಲ್ಲೆ ಮಾಡಿ ಕಾಲು ಮುರಿದ ಬೆಳ್ತಂಗಡಿಯ ನಾವೂರನಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಜನತಾ ಕಾಲೋನಿಯ ನಿವಾಸಿಗಳಾದ ದಿ.ಆಲಿಯಬ್ಬ ಮತ್ತು ಮರಿಯಮ್ಮ ದಂಪತಿಯ ಪುತ್ರಿ ಸೈನಾಝ್(27)ಳನ್ನು ಆಕೆ ಪ್ರೀತಿಸುತ್ತಿದ್ದ ಯುವಕ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಕಲ್ಲಾಜೆ ನಿವಾಸಿಯಾದ ಸುಲೈಮಾನ್ ಮತ್ತು ಫಾತಿಮಾ ದಂಪತಿಗಳ ಪುತ್ರ ಅಬ್ದುಲ್ ಆರಿಫ್(29) ಜೊತೆ ಬೆಳ್ತಂಗಡಿ ತಾಲೂಕಿನ ನಾವೂರಿನ ಮುರ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ದಿನಾಂಕ 11-03-2012 ರಂದು ಮದುವೆ ಕೊಡಲಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಆರಂಭದಲ್ಲಿ ಪತ್ನಿ ಜೊತೆಗೆ ಚೆನ್ನಾಗಿಯೇ ಇದ್ದ ಆರಿಫ್ ಕ್ರಮೇಣ ಅಮಲು ಪದಾರ್ಥ ಸೇವಿಸಿ ಪತ್ನಿ ಜೊತೆ ಗಲಾಟೆ ಮಾಡುತ್ತಾ ಹಲ್ಲೆ ಮಾಡಲು ಆರಂಭಿಸಿದ್ದಾನೆ. ಈ ವಿಚಾರ ತಿಳಿದು ಎರಡು ಮನೆಯವರು ಸಂಧಾನ ಮಾಡುತ್ತಾ ಇದ್ರು. ಅದಲ್ಲದೆ ನಡ ಗ್ರಾಮದ ಕುತ್ರೋಟ್ಟು ಎಂಬಲ್ಲಿ ಬಾಡಿಗೆ ಮನೆ ಮಾಡಿ ವಾಸವಿದ್ದರು. ಆರಿಫ್ ಗುರುವಾಯನಕೆರೆ ಮರದ ಮಿಲ್ ಮಾಲೀಕರೊಬ್ಬರ ಜೊತೆಯಲ್ಲಿ ಮರದ ಕೆಲಸ ಮಾಡುತ್ತಿದ್ದಾನೆ.

ಘಟನೆಯ ವಿವರ: ಡಿಸೆಂಬರ್ 11 ರಂದು ಸಂಜೆ 5 ಗಂಟೆಗೆ ಆರಿಫ್ ಇಂದಬೆಟ್ಟುವಿನ ಕಲ್ಲಾಜೆ ತಾಯಿ ಮನೆಗೆ ಹೋಗೋಣ ಎಂದು ಬೈಕ್ ನಲ್ಲಿ ಹೆಂಡತಿ ಮಕ್ಕಳನ್ನು ಕೂರಿಸಿಕೊಂಡು ಹೋಗಿದ್ದಾನೆ. ಈ ವೇಳೆ ನಾವೂರು ತಲುಪಿದಾಗ ಬೈಕ್ ಕೆಟ್ಟು ಹೋಗಿದೆ.ಬಳಿಕ ಆರಿಫ್ ನಿನ್ನ ಅಣ್ಣ ಹಮೀದ್ ಮನೆಗೆ ಹೋಗೋಣ ಎಂದು ಅಲ್ಲಿಗೆ ಕರೆದುಕೊಂಡು ಹೋದಾಗ ಮನೆಗೆ ಬೀಗ ಹಾಕಿತ್ತು. ನಂತರ ಆರಿಫ್ ಬಾಗಿಲಿನ ಬೀಗ ಮುರಿದು ಸೈನಾಝ್ ಳನ್ನು ಮನೆಯೊಳಗೆ ಕೂಡಿ ಹಾಕಿ ಅಮಲು ಪದಾರ್ಥ ಸೇವಿಸಿದ ಮತ್ತಿನಲ್ಲಿ ಏಕಾಏಕಿ ಹಲ್ಲೆ ಮಾಡಿದ್ದಾನೆ. ಅವಾಚ್ಯ ಶಬ್ದಗಳಿಂದ ಬೈದು ದೇಹದ ವಿವಿಧ ಭಾಗಕ್ಕೆ ಹಲ್ಲೆ ಮಾಡಿ ಚಪಾತಿ ಮಾಡುವ ಲಟ್ಟಣಿಗೆಯಿಂದ ಕಾಲಿಗೆ ಗಂಭೀರ ಹಲ್ಲೆ ಮಾಡಿದ್ದಾನೆ. ಇದರಿಂದ ಆಕೆಯ ಕಾಲು ಮುರಿದಿದ್ದು ಈ ವಿಚಾರ ತಿಳಿದ ಸೈನಾಝ್ ಮನೆಯವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಸೈನಾಝ್ : ಮದುವೆಯಾಗಿ 10 ವರ್ಷದಿಂದಲೂ ಗಂಡ ಪ್ರತಿನಿತ್ಯ ದೈಹಿಕ ಹಿಂಸೆ ನೀಡ್ತಾ ಇದ್ದಾರೆ. ಆದ್ರೂ ನಾನು ಅವರೊಂದಿಗೆ ಜೀವನ ಸಾಗಿಸುತ್ತಿದ್ದೆ. ಈಗ ಮತ್ತೆ ನನ್ನನ್ನು ಮನೆಯೊಂದರಲ್ಲಿ ಕೂಡಿ ಹಾಕಿ ಬೈದು ಹೊಡೆದು ಕೊನೆಗೆ ಕಾಲನ್ನು ಮುರಿದಿದ್ದಾರೆ. ಗಂಡನಿಗೆ ಗಾಂಜಾ , ಎಮ್.ಡಿ.ಎಮ್ ಸೇವಿಸುವ ಅಭ್ಯಾಸ ಇದ್ದು ಇದರಿಂದ ಈ ರೀತಿ ಹಿಂಸೆ ನೀಡುತ್ತಿದ್ದಾರೆ. ನನಗೆ ನ್ಯಾಯ ಬೇಕು ಅದಕ್ಕಾಗಿ ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದು ಹಲ್ಲೆಗೊಳಗಾದ ಸೈನಾಝ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇನ್ನೂ ಅಮಲು ಪದಾರ್ಥ ಸೇವಿಸಿ ಹಲ್ಲೆ ಮಾಡಿದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ IPC 1860,u/c 323,324,504,506 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯನ್ನು ಮುಂದುವರಿಸಿದ್ದಾರೆ.
