ಮಂಗಳೂರು: ಮಂಗಳೂರು ಮತ್ತು ಬೆಂಗಳೂರು ವ್ಯಾವಹಾರಿಕ ನಂಟು ಹೊಂದಿರುವ ರಾಜ್ಯದ ಪ್ರಮುಖ ನಗರಗಳು. ಆದರೆ ಈ ನಗರಗಳನ್ನು ಸಂಪರ್ಕಿಸುವ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಉದ್ಯಮ ಕ್ಷೇತ್ರಕ್ಕೆ ಬರೆ ಎಳೆದಿದೆ.
ಬೆಂಗಳೂರು-ಮಂಗಳೂರು ಮಧ್ಯೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಿರಾಡಿ ಬಳಿಕ ದೋಣಿಗಲ್ನಿಂದ ಮಾರನಹಳ್ಳಿವರೆಗೆ ಸುಮಾರು 16ಕಿಲೋ ಮೀಟರ್ ರಸ್ತೆ ರಾಡಿ ಎದ್ದು ಹೋಗಿದ್ದು, ಪ್ರವಾಸಿಗರಲ್ಲಿ ಇದು ರಾಷ್ಟ್ರೀಯ ಹೆದ್ದಾರಿಯೇ ಎನ್ನುವ ಅನುಮಾನ ಹುಟ್ಟಿಸುವಂತಿದೆ. ಬೇಸಿಗೆಯಲ್ಲೇ ಈ ರಸ್ತೆಯಲ್ಲಿ ಸಾಗುವ ಲಾರಿ, ಕಂಟೈನರ್, ಟ್ರಕ್ ಸೇರಿದಂತೆ ಎಲ್ಲ ವಾಹನಗಳು ಸರ್ಕಸ್ ಮಾಡಿಕೊಂಡು ಹೋಗುತ್ತಿದ್ದರೆ, ಮಳೆಗಾಲ ಸ್ಥಿತಿ ಮತ್ತಷ್ಟು ಭಯಾನಕವಾಗಲಿದೆ.
ಮಂಗಳೂರು-ಬೆಂಗಳೂರು ರಸ್ತೆ ಉತ್ತಮವಿದ್ದಾಗ ಕೇವಲ 6.30ರಿಂದ 7ಗಂಟೆ ಅವಧಿಯಲ್ಲಿ ಬೆಂಗಳೂರು ತಲುಪಬಹುದು. ಆದರೆ ರಸ್ತೆ ಕೆಟ್ಟ ಕಾರಣ ಈಗ 9.30ರಿಂದ 10.00ಗಂಟೆ ತಗಲುತ್ತದೆ. ಒಂದು ಕಡೆ ಬಿ.ಸಿ.ರೋಡ್ನಿಂದ-ಗುಂಡ್ಯದವರೆಗೆ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದರೆ ಅತ್ತ ಸಕಲೇಶಪುರದಿಂದ-ಹಾಸನ ಚತುಷ್ಪಥ ಕಾಮಗಾರಿಯೂ ನಡೆಯುತ್ತಿದೆ. ಈ ಕಾಮಗಾರಿಯಿಂದ ಹಲವೆಡೆ ಬಸ್ ಸೇರಿದಂತೆ ಎಲ್ಲ ವಾಹನಗಳು ಏಕಪಥ ರಸ್ತೆಯಲ್ಲೇ ವಾಹನಗಳು ಸಾಗಬೇಕಾಗಿದೆ. ಈ ಮಧ್ಯೆ ಸಿಗುವ ದೋಣಿಗಲ್-ಮಾರನಹಳ್ಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಬೆಂಗಳೂರು-ಮಂಗಳೂರು ಪ್ರಯಾಣ ದುಸ್ತರಗೊಳಿಸಿದೆ.
ರಾಜ್ಯದ ಏಕೈಕ ಬಂದರು ನಗರಿ ಮಂಗಳೂರಿನ ಮೇಲೆ ಬೆಂಗಳೂರಿನ ವಾಣಿಜ್ಯೋದ್ಯಮ ನಿಂತಿದೆ. ಬೆಂಗಳೂರಿನವರು ಮಂಗಳೂರು ಹೊರತುಪಡಿಸಿದರೆ ಚೆನ್ನೈ ಬಂದರಿಗೆ ಹೋಗಬೇಕು. ರಸ್ತೆ ಹದಗೆಟ್ಟ ಕಾರಣ ಈಗ ಕರಾವಳಿ ಉದ್ಯಮಕ್ಕೆ ನೂರಾರು ಕೋಟಿ ರೂ. ಹೊಡೆತವಾಗಿದೆ. ಇದು ಮಾತ್ರವಲ್ಲದೆ ಎನ್ಎಂಪಿಟಿ, ಎಂಆರ್ಪಿಎಲ್, ಎಂಎಸ್ಇಝಡ್ ಸಹಿತ ದೇಶದ ಬೃಹತ್ ಆರ್ಥಿಕ ವ್ಯವಹಾರ ನಡೆಸುವ ಉದ್ದಿಮೆಗಳು ರಾಜ್ಯದ ಕರಾವಳಿ ಭಾಗದಲ್ಲಿದೆ. ಈ ಸಂಸ್ಥೆಗಳ ನೇರ ವ್ಯವಹಾರಗಳಿಗೂ ಅಡ್ಡಿಯಾಗಿದೆ. ಮಂಗಳೂರು-ಬೆಂಗಳೂರು ಮಧ್ಯೆ ತರಕಾರಿ, ದಿನಸಿ ಸಾಮಗ್ರಿ, ಇಂಧನ ಸೇರಿದಂತೆ ನಾನಾ ರೀತಿಯ ಉದ್ಯಮ ವ್ಯವಹಾರ ನಂಟುಗಳಿದ್ದು, ಇದಕ್ಕೆ ಹೊಡೆತ ಬಿದ್ದಿದೆ. ರಸ್ತೆ ಕುಲಗೆಟ್ಟ ಕಾರಣ ಪ್ರವಾಸೋದ್ಯಮ್ಕೂ ಹಿನ್ನೆಡೆಯಾಗಿದೆ