ವಿಟ್ಲ: ಸಿಡಿಲು ಬಡಿದು ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ವಿಟ್ಲ ಸಮೀಪದ ಕೇಪು ಗ್ರಾಮದ ಚೆಲ್ಲಡ್ಕ ದಲ್ಲಿ ನಡೆದಿದೆ.

ಇಲ್ಲಿನ ಶಶಿಶೇಖರ ಭಂಡಾರಿ ಎಂಬವರ ಮನೆಗೆ ಜು.18ರ ಗುರುವಾರ ರಾತ್ರಿ ಸಿಡಿಲು ಬಡಿದು ಮನೆಯೊಳಗಿದ್ದ ಫ್ರಿಡ್ಜ್, ಗ್ರೈಂಡರ್ ಹಾಗೂ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಬೆಂಕಿಗೆ ಆಹುತಿಯಾಗಿವೆ.
ಇನ್ನು ಪಕ್ಕದ ಮನೆಯ ಒಂದು ಬದಿಗೆ ಬೆಂಕಿ ತನ್ನ ಕೆನ್ನಾಲಿಗೆ ಚಾಚಿದ್ದು, ಸ್ಥಳೀಯ ಯುವಕರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.ಬಳಿಕ ಅಗ್ನಿಶಾಮಕದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ.
ಘಟನೆಯಿಂದಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ್ದು, ಮನೆಯೊಳಗಿದ್ದ ಶಶಿಶೇಖರ ಭಂಡಾರಿ, ಪತ್ನಿ, ಇಬ್ಬರು ಮಕ್ಕಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ಪಿಡಿಓ ಗೋಕುಲದಾಸ್ ಭಕ್ತ, ಪಂಚಾಯತ್ ಅಧ್ಯಕ್ಷ ರಾಘವ ಸಾರಡ್ಕ, ವಿಎ, ಪಂಚಾಯತ್ ಸದಸ್ಯರಾದ ಜಗಜ್ಜೀವನ್ ರಾಮ್ ಶೆಟ್ಟಿ ಮೈರ, ಪುರುಷೋತ್ತಮ ಕಲ್ಲಂಗಳ, ಬಿಜೆಪಿ ಮುಖಂಡರಾದ ರಾಜೀವ ಭಂಡಾರಿ ಕುಂಡಕೋಳಿ, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ವಿಎ ಆಫೀಸ್ ನ ಗಣೇಶ್ ಪ್ರಭು, ಗ್ರಾಮ ಪಂಚಾಯತ್ ಸಹಾಯಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.