ಬೆಳ್ತಂಗಡಿ : ಬೆಳಗ್ಗಿನ ಜಾವ ಮನೆಯ ಹಿಂಬಾಗಿಲಿನ ಮೂಲಕ ಮನೆಗೆ ನುಗ್ಗಿದ ಕಳ್ಳರು ನಗದು ಹಾಗೂ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಬೆಳ್ತಂಗಡಿ ಪೋಲಿಸ್ ಠಾಣಾ ವ್ಯಾಪ್ತಿಯ ನ್ಯಾಯತರ್ಪು ಗ್ರಾಮದ ಜಾರಿಗೆ ಬೈಲು ಮಸೀದಿ ಬಳಿ ನಡೆದಿದೆ.
ನಿನ್ನೆ ಬೆಳಗ್ಗಿನ ಜಾವ ಜನವಸತಿ ಪ್ರದೇಶದಲ್ಲಿರುವ ಮೆಸ್ಕಾಂ ಇಲಾಖೆಯ ನಿವೃತ್ತ ಉದ್ಯೋಗಿ ಅಬ್ದುಲ್ ಹಮೀದ್ ಅವರ ಮನೆಗೆ ಯಾರು ಇಲ್ಲದ ವೇಳೆ ಹಿಂಬಾಗಿಲಿನ ಮೂಲಕ ನುಗ್ಗಿದ ಕಳ್ಳರು ಮನೆಯ 2-3 ಗೋದ್ರೆಜ್ ಗಳನ್ನು ಒಡೆದು ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ನಗದು ಮತ್ತು ಒಡವೆ ಕಳ್ಳತನ ಮಾಡಿದ್ದಾರೆ.
ಬೆಳಗ್ಗೆ ಅವರ ಮಗ ಬಂದು ನೋಡಿದಾಗ ಕಳ್ಳತನವಾಗಿರೋದು ಗೊತ್ತಾಗಿದೆ. ಕೂಡಲೇ ಮಾಹಿತಿ ತಿಳಿದ ಗ್ರಾಮ ಪಂಚಾಯತ್ ಸದಸ್ಯರಾದ ಲತೀಫ್ ಪರಿಮ ಗ್ರಾಮ ಬೀಟ್ ಪೋಲಿಸರಿಗೆ ಮತ್ತು ಬೆಳ್ತಂಗಡಿ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಬೆಳ್ತಂಗಡಿ ಪೋಲಿಸ್ ಠಾಣಾ ಉಪನಿರೀಕ್ಷಕರಾದ ನಂದ ಕುಮಾರ್ ರವರ ಮಾರ್ಗದರ್ಶನದಲ್ಲಿ ಪ್ರೊಬೆಶನರಿ ಸಬ್ ಇನ್ಸ್ಪೆಕ್ಟರ್ ಮುರಳೀಧರ್, ಠಾಣಾ ಕ್ರೈಮ್ ಸಿಬ್ಬಂದಿಯಾದ ಅಶೋಕ್ ಮತ್ತು ಬಸವರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರೆಸಿದ್ದಾರೆ.
ಘಟನಾ ಸ್ಥಳಕ್ಕೆ ಗ್ರಾಮ ಪಂಚಾಯತ್ ಸದಸ್ಯರಾದ ಕೆ.ಎಮ್. ಅಬ್ದುಲ್ ಕರೀಮ್ ಗೇರುಕಟ್ಟೆ, ಇಲ್ಯಾಸ್,ಅಬ್ದುಲ್ ರೆಹಮಾನ್ ಸಿಟಿಲ್ಯಾಂಡ್, ಲತೀಫ್, ಶುಕೂರು,ಸಿದ್ದೀಕ್ ಜಿ.ಎಚ್ ಮತ್ತಿತರರು ಭೇಟಿ ನೀಡಿದ್ದಾರೆ.