ಬಂಟ್ವಾಳ: ಮನೆಯ ಬಾಗಿಲು ಮುರಿದು ಒಳಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಣಿನಾಲ್ಕೂರು ಎಂಬಲ್ಲಿ ನಡೆದಿದೆ.
ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆ ನಿವಾಸಿ ಕರಿಯ ಮೂಲ್ಯ ಅವರ ಮನೆಗೆ ನುಗ್ಗಿದ ಕಳ್ಳರು 2.50. ಲಕ್ಷ ಮೌಲ್ಯದ 9 ಪವನ್ ಚಿನ್ನವನ್ನು ಕಳ್ಳತನಗೈದಿದ್ದಾರೆ.
ಕರಿಯ ಮೂಲ್ಯ ಅವರ ಮಗಳು ಶ್ವೇತಾ ಮದುವೆ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಕಾರಣ ಕಿವಿಯೊಲೆ, ಕುತ್ತಿಗೆ ಚೈನ್, ಸೇರಿದಂತೆ ಇನ್ನೂ ಕೆಲವು ಚಿನ್ನಾಭರಣಗಳನ್ನು ಖರೀದಿಸಿ ಮನೆಯ ಕಪಾಟಿನಲ್ಲಿ ಇರಿಸಿದ್ದರು. ಮೇ.22 ರಂದು ಬೆಳಿಗ್ಗೆ 9 ಗಂಟೆ ವೇಳೆಗೆ ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ಹೋಗಿದ್ದರು. ಸೋಮವಾರ ಸಂಜೆ ಮನೆಗೆ ಬಂದು ನೋಡುವಾಗ ಮುಂಬಾಗಿಲು ಮರಿದ ಸ್ಥಿತಿಯಲ್ಲಿತ್ತು. ಮನೆಯೊಳಗೆ ಹೋಗಿ ನೋಡಿದಾಗ ಕಪಾಟಿನ ಬೀಗ ಮುರಿದು ಚಿನ್ನಾಭರಣ ಕದ್ದಿರೋದು ಬೆಳಕಿಗೆ ಬಂದಿದೆ.
ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್, ಎಸ್.ಐ.ಹರೀಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.