ಪಣಜಿ: ಭಾರೀ ಮಳೆಗೆ ಮಡಗಾಂವ್ನ ಖರೇಬಂದ್ನಲ್ಲಿ ವಾಸವಾಗಿರುವ ಮಾಜಿ ಗೃಹ ರಕ್ಷಕ ದಳದ ವಿಮಲ್ ಶಿರೋಡ್ಕರ್ ಅವರ ಮನೆ ಕುಸಿದು ಬಿದ್ದು ಅಪಾರ ಹಾನಿ ಸಂಭವಿಸಿದ್ದು, ಇದೇ ವೇಳೆ ಮನೆಯಲ್ಲಿದ್ದ ವಿಮಲ್ ಅಪಾಯದಿಂದ ಪಾರಾದ ಘಟನೆ ಸಂಭವಿಸಿದೆ.
ವಿಮಲ್ ಬಿಸ್ಕಟ್ ತರುವ ಸಲುವಾಗಿ ಮನೆಯಿಂದ ಹೊರಗಡೆ ತೆರಳಿದ್ದು, ಇದೇ ಸಂದರ್ಭದಲ್ಲಿ ಮನೆ ಕುಸಿದಿದೆ. ಇದರಿಂದಾಗಿ ವಿಮಲ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಕಾರ್ಪೊರೇಟರ್ ಮಹೇಶ್ ಅಮೋನ್ಕರ್, ಶಾಸಕ ದಿಗಂಬರ್ ಕಾಮತ್ ಭೇಟಿ ನೀಡಿ ಪರಿಶೀಲನೆ ನಡೆಸಿ ವಿಮಲ್ ಶಿರೋಡ್ಕರ್ ಅವರಿಗೆ ಬೇರೆಡೆ ವಸತಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಬೆಳಗ್ಗೆ ಸುಮಾರು 10:30 ರ ವೇಳೆಗೆ ವಿಮಲ್ ಶಿರೋಡ್ಕರ್ ವಾಸಿಸುತ್ತಿದ್ದ ಮನೆ ಕುಸಿದಿದೆ. ಕಳೆದ 65 ವರ್ಷಗಳಿಂದ ತನ್ನ ಸಹೋದರನೊಂದಿಗೆ ಈ ಮನೆಯಲ್ಲಿ ವಾಸಿಸುತ್ತಿದ್ದರು. ಈ ಘಟನೆಯಿಂದ ಮನೆಯಲ್ಲಿದ್ದ ಗ್ಯಾಸ್, ಕಪಾಟು, ಮೂರು ಹಾಸಿಗೆ, ಆಹಾರ ಪದಾರ್ಥಗಳು, ಬಟ್ಟೆಬರೆ ಎಲ್ಲವೂ ಮಣ್ಣಿನಡಿಗೆ ಬಿದ್ದಿದೆ ಎಂದು ವಿಮಲ್ ಹೇಳಿದ್ದಾರೆ. ಬಿಸ್ಕೆಟ್ ತರಲು ಐದು ನಿಮಿಷಗಳ ಕಾಲ ಮನೆಯಿಂದ ಹೊರಬಂದಿದ್ದರಿಂದ ವಿಮಲ್ ಶಿರೋಡ್ಕರ್ ಅವರ ಜೀವ ಉಳಿಸಿಕೊಂಡರು.
ವಿಮಲ್ ಶಿರೋಡ್ಕರ್ ಸುಮಾರು 34 ವರ್ಷಗಳಿಂದ ಗೃಹರಕ್ಷಕರಾಗಿ ಕೆಲಸ ಮಾಡಿದ್ದಾರೆ. ಜನರ ಸೇವೆಗಾಗಿ ಈ ಕೆಲಸ ಮಾಡಿದ್ದೇನೆ ಎನ್ನುತ್ತಾರೆ. ಅವರ ದೀರ್ಘಾಯುಷ್ಯ ಜನ ಸೇವೆ ಮಾಡಿದ್ದೇ ಕಾರಣ ಎಂದೇ ಹೇಳಲಾಗುತ್ತಿದೆ. ಇವರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕಾರ್ಪೊರೇಟರ್ ಮಹೇಶ್ ಅಮೋನ್ಕರ್ ತಿಳಿಸಿದ್ದಾರೆ.