ಬೆಂಗಳೂರು: ಮ್ಯಾಟ್ರಿಮೋನಿ ಸೈಟ್ನಲ್ಲಿ ವಧು ಹುಡುಕಾಟ ಮಾಡುವ ಶ್ರೀಮಂತರನ್ನು ಟಾರ್ಗೆಟ್ ಮಾಡಿ ಹಾನಿಟ್ರ್ಯಾಪ್ ಮಾಡುತ್ತಿದ್ದ ಮಹಿಳೆಯನ್ನು ಬೆಂಗಳೂರು ನಗರದ ನಗರದ ಇಂದಿರಾ ನಗರ ಪೊಲೀಸರು ಬಂಧಿಸಿದ್ದಾರೆ.
ಕವಿತಾ ಬಂಧಿತ ಮಹಿಳೆಯಾಗಿದ್ದು, ಈಕೆ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಆದರೆ ಕೆಲ ವರ್ಷಗಳ ಹಿಂದೆ ಕೆಲಸ ಬಿಟ್ಟು ಸುಲಭವಾಗಿ ಹಣ ಸಂಪಾದನೆ ಮಾಡಲು ಈ ಮಾರ್ಗ ಕಂಡುಕೊಂಡಿದ್ದಳು ಎನ್ನಲಾಗಿದೆ. ಕವಿತಾ ವಿರುದ್ಧ ಶ್ರೀ ಪ್ರೇಮ್ ಡ್ಯಾನಿಯಲ್ ಎಂಬ ಯುವಕ ದೂರು ನೀಡಿದ್ದು, ಈ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಶ್ರೀಪ್ರೇಮ್ ಮ್ಯಾಟ್ರಿಮೋನಿ ವೆಬ್ಸೈಟ್ನಲ್ಲಿ ವಧುಗಾಗಿ ಹುಡುಕುತ್ತಿದ್ದ ಸಂದರ್ಭದಲ್ಲಿ ಕವಿತಾ ಪರಿಚಯವಾಗಿತ್ತು. ಆ ಬಳಿಕ ಫೋನ್ನಲ್ಲಿ ಮಾತನಾಡಿತ್ತಾ ಮದುವೆಯಾಗುವುದಾಗಿ ಡ್ಯಾನಿಯಲ್ರೊಂದಿಗೆ ಕ್ಲೋಸ್ ಆಗಿದ್ದಳು.
ಕೆಲ ದಿನಗಳ ಬಳಿಕ ತನ್ನ ಅಪಾರ್ಟ್ಮೆಂಟ್ಗೆ ಡ್ಯಾನಿಯಲ್ರನ್ನ ಕರೆಸಿಕೊಂಡಿದ್ದ ಕವಿತಾ, ಆತನೊಂದಿಗೆ ಖಾಸಗಿಯಾಗಿರುವ ಫೋಟೋ ಮತ್ತು ವಿಡಿಯೋಗಳನ್ನು ತೆಗೆದುಕೊಂಡಿದ್ದಳು. ಆ ಬಳಿಕ ತನ್ನ ಆಸಲಿ ಮುಖವನ್ನು ತೋರಿಸಿದ್ದ ಕವಿತಾ, 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಳು. ಹಣ ಕೊಟ್ಟರೆ ಸುಮ್ಮನಾಗುತ್ತೇನೆ ಇಲ್ಲವಾದರೆ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಬೆದರಿಕೆ ಹಾಕಿದ್ದಳು. ಈ ವೇಳೆ ಆಕೆಯಿಂದ ತಪ್ಪಿಸಿಕೊಳ್ಳಲು 2 ಲಕ್ಷ ರೂಪಾಯಿ ನೀಡಿದ್ದ ಡ್ಯಾನಿಯಲ್ ಬಳಿಕ ಪೊಲೀಸರಿಗೆ ದೂರು ನೀಡಿದ್ದರು ಎಂಬ ಮಾಹಿತಿ ಲಭಿಸಿದೆ.
ಸದ್ಯ ಆರೋಪಿಯ ವಿಚಾರಣೆ ನಡೆಸಿದ ಪೊಲೀಸರಿಗೆ ಈಕೆ ಇದಕ್ಕೂ ಮುನ್ನವೇ ಹಲವರಿಗೆ ಇದೇ ರೀತಿ ಹಾನಿಟ್ರ್ಯಾಪ್ ಮಾಡಿರುವ ಮಾಹಿತಿ ತಿಳಿದು ಬಂದಿದೆ. ಈಗಾಗಲೇ ನಗರದ ಮಲ್ಲೇಶ್ವರಂ, ಮಹಾದೇವಪುರ ಪೊಲೀಸ್ ಠಾಣೆಗಳಲ್ಲಿ ಹಲವರ ವಿರುದ್ಧ ದೂರು ನೀಡಿದ್ದಾಳೆ. ಈಕೆಯ ಕೃತ್ಯದಿಂದ ವಂಚನೆಗೊಳಗಾಗಿದ್ದ ವ್ಯಕ್ತಿಯೊಬ್ಬ ಜೈಲು ಸೇರಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.