ಪುತ್ತೂರು: ಇಲ್ಲಿನ ಹೆಚ್ಚುವರಿ ಕಂದಾಯ ವಿಭಾಗದ ನೋಡೆಲ್ ಅಧಿಕಾರಿಯಾಗಿ ನಗರಾಭಿವೃದ್ದಿ ಇಲಾಖೆಯ ಅಪರ ಕಾರ್ಯದರ್ಶಿಯಾದ ಎಚ್. ಕೆ. ಕೃಷ್ಣಮೂರ್ತಿ ಅವರನ್ನು ಸರಕಾರ ನೇಮಿಸಿದೆ.
ಈ ನೇಮಕಾತಿಯು ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿನ ಕಂದಾಯ ಇಲಾಖಾ ವಿಭಾಗದ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ನಡೆದಿದೆ ಎನ್ನಲಾಗಿದೆ.
ಇನ್ನು ನೇಮಕಾತಿ ಕುರಿತಂತೆ ಶಾಸಕರಾದ ಅಶೋಕ್ ರೈಯವರು ಕಂದಾಯ ಸಚಿವರಿಗೆ, ನಗರಸಭೆ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ ಕನ್ವರ್ಶನ್ ಸಮಸ್ಯೆ ಸೇರಿದಂತೆ ಕಂದಾಯ ವಿಭಾಗಕ್ಕೆ ಸೇರಿದ ಅನೇಕ ಎಡರುತೊಡರುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹೆಚ್ಚುವರಿ ಅಧಿಕಾರಿಯನ್ನು ನೇಮಕ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಶಾಸಕರ ಮನವಿಗೆ ಸ್ಪಂದಿಸಿದ ಸಚಿವರು ಎಚ್.ಕೆ . ಕೃಷ್ಣಮೂರ್ತಿಯವರನ್ನು ಹೆಚ್ಚುವರಿ ನೋಡೆಲ್ ಅಧಿಕಾರಿಯಾಗಿ ನೇಮಕ ಮಾಡಿದ್ದಾರೆ.
ಈ ಹಿಂದೆ ಎಚ್.ಕೆ . ಕೃಷ್ಣಮೂರ್ತಿಯವರು ಪುತ್ತೂರಿನಲ್ಲಿ ಸಹಾಯಕ ಕಮಿಷನರ್ ಆಗಿ ಮತ್ತು ದ.ಕ ಜಿಲ್ಲಾ ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ಶಾಸಕರು ಸ್ಥಳೀಯರಿಗೆ, ನೋಡೆಲ್ ಅಧಿಕಾರಿಯ ನೇಮಕದಿಂದ ನಗರಸಭಾ ವ್ಯಾಪ್ತಿಯಲ್ಲಿನ ಕಂದಾಯ ಸಮಸ್ಯೆಗಳು ಶೀಘ್ರದಲ್ಲೇ ಇತ್ಯರ್ಥವಾಗಲಿದೆ ಎಂದು ತಿಳಿಸಿದ್ದಾರೆ.