ಮೂಡಬಿದ್ರೆ: ನಗರದ ಜೈನ್ ಪೇಟೆ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಆಟೋ ಚಾಲಕನನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ತಿಂಗಳ (ಮೇ) 30ರಂದು ಜೈನ್ ಪೇಟೆ ನಿವಾಸಿ ಗುಲಾಬಿ(80) ಎನ್ನುವವರು ರಸ್ತೆ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ಆಟೋವೊಂದು ಡಿಕ್ಕಿಯಾಗಿತ್ತು. ಆಟೋ ಚಾಲಕ ವೃದ್ಧೆಯನ್ನು ತಿರುಗಿ ನೋಡದೇ ಸ್ಥಳದಿಂದ ಕಾಲ್ಕಿತ್ತಿದ್ದ.
ಇದಾದ ಬಳಿಕವು ಅನೇಕ ವಾಹನಗಳು ಅದೇ ರಸ್ತೆಯಲ್ಲಿ ಸಂಚರಿಸಿದ್ದು, ಯಾರೂ ಕೂಡ ಗುಲಾಬಿ ಅವರ ಸ್ಥಿತಿಯನ್ನು ಗಮನಿಸಿಲ್ಲ. ಬಹಳ ಸಮಯದ ನಂತರ ಅದೇ ಮಾರ್ಗವಾಗಿ ಬಂದ ಸ್ಥಳೀಯ ಬಿಜೆಪಿ ನಾಯಕ ಸಂಪತ್ ಪೂಜಾರಿ ನೆತ್ತೋಡಿ ಎನ್ನುವವರು ವೃದ್ಧೆಯ ಸಹಾಯಕ್ಕೆ ಮುಂದಾಗಿದ್ದು, ತಮ್ಮ ವಾಹನದಲ್ಲೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಈ ಎಲ್ಲಾ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಸಿಸಿಟಿವಿ ವಿಡಿಯೋ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿದ್ದಾರೆ.
ಹೆಚ್ಚಿನ ಮಾಹಿತಿಯನ್ನು ನೀರಿಕ್ಷಿಸಲಾಗಿದೆ.