ಪುತ್ತೂರು: ರಾಜ್ಯದಲ್ಲಿ ಹಿಜಾಬ್ ಪ್ರಕರಣದ ಗೊಂದಲದ ಬಳಿಕ ದೇವಸ್ಥಾನಗಳಲ್ಲಿ ಅನ್ಯ ಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎನ್ನುವ ಹಿಂದೂ ಸಂಘಟನೆಗಳ ಒತ್ತಾಯದ ಹಿನ್ನೆಲೆಯಲ್ಲಿ ಈ ಬಾರಿ ಪುತ್ತೂರು ಜಾತ್ರೆಗೆ ಅನ್ಯಮತೀಯ ವ್ಯಾಪಾರಿಗಳಿಗೆ ವ್ಯವಹಾರ ಮಾಡಲು ಸಂಪೂರ್ಣ ನಿಷೇಧ ಹೇರಲಾಗಿದೆ ಎಂಬುವುದು ಎಲ್ಲರಿಗೂ ಗೊತ್ತೇ ಇದೆ. ಈ ಬಾರಿ ಜಾತ್ರೆಯ ಗದ್ದೆಯಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೂ ಅವಕಾಶ ನೀಡಿಲ್ಲ. ಹಿಂದೂಗಳ ಆಟೋ ಬಳಸುವಂತೆಯೂ ಕರೆ ನೀಡಲಾಗಿತ್ತು.
ಇದರ ನಡುವೆ ಮಲ್ಲಿಗೆ ವ್ಯಾಪಾರಕ್ಕೂ ಹಿಂದೂ ಕಾರ್ಯಕರ್ತರು ಇಳಿದಿದ್ದಾರೆ. ದೇವರ ಗದ್ದೆಯಲ್ಲಿ 300ಕ್ಕೂ ಹೆಚ್ಚು ಅಂಗಡಿಗಳು ತಲೆ ಎತ್ತಿವೆ. ಉಳ್ಳಾಲ್ತಿ ದೈವ ಮತ್ತು ಶ್ರೀ ಮಹಾಲಿಂಗೇಶ್ವರ ದೇವರ ಭೇಟಿಯ ದಿನ 50 ಲಕ್ಷಕ್ಕೂ ಅಧಿಕ ಮಲ್ಲಿಗೆ ವ್ಯಾಪಾರವಾಗಿದೆ.
ಹಿಂದೂ ಜಾಗರಣಾ ವೇದಿಕೆ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೆ ಪ್ರಯುಕ್ತ ನಡೆಯುವ ಉಳ್ಳಾಲ್ತಿ ದೈವದ ಭೇಟಿಯ ದಿನ ಮಲ್ಲಿಗೆಯ ವ್ಯಾಪಾರವನ್ನು ಆರಂಭಿಸಿದೆ. ಕಳೆದ ಏಳು ವರ್ಷಗಳಿಂದ ಈ ಮಲ್ಲಿಗೆ ವ್ಯಾಪಾರವನ್ನು ಮಾಡಲು ಆರಂಭಿಸಲಾಗಿದ್ದು, ಈ ಬಾರಿ ಮಾತ್ರ ಶೇಕಡಾ ನೂರಕ್ಕೆ ನೂರು ಹಿಂದೂಗಳ ಮೂಲಕವೇ ಮಲ್ಲಿಗೆ ವ್ಯಾಪಾರವನ್ನು ಮಾಡಿಸಲಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಶಿ ದಿನೇಶ್ ಪಂಜಿಗ ಹೇಳಿದ್ದಾರೆ.