ಮಂಗಳೂರು; ಹಿಂದೂ ಯುವಕನನ್ನು ಮುಸ್ಲಿಂ ಯುವತಿ ಮದುವೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ ಎನ್ನಲಾಗುತ್ತಿದೆ. ಇಬ್ಬರ ವಿವಾಹದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ಕಾಟಿಪಳ್ಳದ ಯುವಕ ಪ್ರಶಾಂತ್ ಭಂಡಾರಿ (31) ಹಾಗೂ 3ನೇ ಬ್ಲಾಕ್ ಆಶ್ರಯ ಕಾಲೋನಿ ನಿವಾಸಿ ಆಯೇಷಾ (19) ವಿವಾಹವಾದ ಜೋಡಿ. ಇವರಿಬ್ಬರು ಕೂಡ ಡಿ.1 ರಂದು ನಾಪತ್ತೆಯಾಗಿದ್ದರು.
ಇನ್ನು ಹಿಂದೂ ಮುಖಂಡ ಶರಣ್ ಪಂಪ್ವೆಲ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ಆಯಿಷಾಳಿಂದ ಅಕ್ಷತಾ.ನೈಜವಾಗಿ ಪ್ರೀತಿಸಿ ಹಿಂದೂ ಸಂಪ್ರದಾಯದಂತೆ ಮದುವೆಯಾದ ಮಂಗಳೂರಿನ ಪ್ರಶಾಂತ್ ಮತ್ತು ಅಕ್ಷತಾ. ನಿಮ್ಮ ವೈವಾಹಿಕ ಜೀವನಕ್ಕೆ ಶುಭಾಶಯಗಳು ಎಂದಿದ್ದಾರೆ. ಅಲ್ಲದೇ ಯುವಕನ ಮಿತ್ರರು ಸಹ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳನ್ನು ವೈರಲ್ ಮಾಡಿದ್ದಾರೆ.
ಆಯಿಷಾ ತನ್ನ ಹೆಸರನ್ನು ಅಕ್ಷತಾ ಎಂದು ಬದಲಿಸಿಕೊಂಡಿದ್ದಾರೆ. ನಾಪತ್ತೆಯಾದ ದಿನ ಆಯಿಷಾ ತಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಯುವತಿ ಕುಟುಂಬ ಮೂಲತಃ ಕಾರವಾರದ ಮುಂಡಗೋಡದವರಾಗಿದ್ದು, ಈಕೆಯ ತಂದೆ ಸ್ಥಳೀಯವಾಗಿ ಉದ್ಯೋಗದಲ್ಲಿದ್ದಾರೆ ಎನ್ನಲಾಗಿದೆ.