ಮಂಗಳೂರು: ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಂಗಳೂರು ವತಿಯಿಂದ ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಎನ್ಐಎ ಒಪ್ಪಿಸುವಂತೆ ಆಗ್ರಹಿಸಿ ಬಜಪೆಯಲ್ಲಿ ಬೃಹತ್ ಜನಾಗ್ರಹ ಸಭೆ ನಡೆಯುತ್ತಿದೆ.
ಬಜಪೆ ಜಂಕ್ಷನ್ನ ಶಾರದ ಮಂಟಪ ಬಳಿ ಸಭೆ ಸೇರಲಾಗಿದ್ದು, ಸುರಿಯುತ್ತಿರುವ ಭಾರಿ ಮಳೆಯ ನಡುವೆಯೂ ಸಭೆ ನಡೆಸಲಾಗುತ್ತಿದ್ದು, ಮಂಗಳೂರು ಸಹಿತ ವಿವಿಧ ಭಾಗಗಳಿಂದ ಕಾರ್ಯಕರ್ತರು, ಸುಹಾಸ್ ಅಭಿಮಾನಿಗಳು ಜನಾಗ್ರಹ ಸಭೆಯಲ್ಲಿ ಭಾಗಿಯಾಗಿದ್ದರು.
ವಾಗ್ನಿ ಹಿಂಜಾವೇ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಅವರಿಂದ ಪ್ರಧಾನ ಭಾಷಣ ನಡೆಯಲಿದ್ದು, ಸುಹಾಸ್ ಹೆತ್ತವರಾದ ಮೋಹನ್ ಶೆಟ್ಟಿ, ಬಜಪೆ ಸುಲೋಚನ ಎಂ ಶೆಟ್ಟಿ, ಶಾಸಕ ಉಮಾನಾಥ ಕೋಟ್ಯಾನ್, ವಿ.ಪ.ಸದಸ್ಯ ಪ್ರತಾಪ ಸಿಂಹ ನಾಯಕ್, ಶರಣ್ ಪಂಪ್ ವೆಲ್, ಶಿವಾನಂದ್ ಮೆಂಡನ್, ಭುಜಂಗ ಕುಲಾಲ್, ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ್ ಮೊದಲಾದವರು ಭಾಗಿಯಾಗಿದ್ದಾರೆ.
ಬಜಪೆ ಪೇಟೆಯಲ್ಲಿ ಜನಾಗ್ರಹ ಸಭೆಯ ಹಿನ್ನೆಲೆಯಲ್ಲಿ ಪೇಟೆ ಪ್ರವೇಶಿಸುವ ವಾಹನಗಳ ತಪಾಸಣೆ ನಡೆಸಲಾಗಿದ್ದು, ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಬಜಪೆ ಪರಿಸರದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.