ಮಡಿಕೇರಿ : 2018 ರಲ್ಲಿ ಜಲಸ್ಫೋಟ ಸಂಭವಿಸಿ ಅನಾಹುತಗಳಿಗೆ ಸಾಕ್ಷಿಯಾಗಿದ್ದ ಮಡಿಕೇರಿ ತಾಲ್ಲೂಕಿನ ಮದೆನಾಡು ವ್ಯಾಪ್ತಿಯ ಸೀಮೆಹುಲ್ಲು ಕಜೆ ಪ್ರದೇಶದಲ್ಲಿ ಮತ್ತೆ ಗುಡ್ಡ ಕುಸಿದಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ಮೂಡಿದೆ.
ಜಿಲ್ಲೆಯಲ್ಲಿ ಮಳೆ ಕ್ಷೀಣಿಸಿದೆ, ಆದರೆ ಎರಡನೇ ಮೊಣ್ಣಂಗೇರಿ ಗ್ರಾಮದಲ್ಲಿ ಗುಡ್ಡ ಕುಸಿದ ಬೆನ್ನಲ್ಲೇ ಸೀಮೆಹುಲ್ಲು ಕಜೆ ಪ್ರದೇಶದಲ್ಲಿ ಕೂಡ ಗುಡ್ಡ ಕುಸಿದ ಘಟನೆ ನಡೆದಿದೆ. ಕೆಸರಿನ ರಭಸಕ್ಕೆ ಕಿ.ಮೀ ನಷ್ಟು ದೂರ ಕಲ್ಲು ಮತ್ತು ಮರದ ದಿಮ್ಮಿಗಳು ಕೊಚ್ಚಿ ಬಂದಿವೆ. ಸ್ಥಳೀಯರ ಪ್ರಕಾರ ಶುಕ್ರವಾರ ನಸುಕು ಸುಮಾರು 3 ಗಂಟೆ ವೇಳೆಗೆ ದೊಡ್ಡದೊಂದು ಶಬ್ದವಾಗಿದೆ.
ಸೂರ್ಯೋದಯದ ನಂತರ ನೋಡಿದಾಗ ಗುಡ್ಡ ಕುಸಿದು ಕೆಸರು ನೀರಿನ ಪ್ರವಾಹ ಹಾದು ಹೋಗಿರುವುದು ಕಂಡು ಬಂದಿದೆ. 2018 ರಂತೆ ಮತ್ತೆ ಜಲಸ್ಫೋಟವಾಗಿದೆ. ಉಳಿದಿರುವ ಗುಡ್ಡವೂ ಕುಸಿಯುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಪ್ರದೇಶದಲ್ಲಿದ್ದ ಸುಮಾರು 15 ಕುಟುಂಬಗಳನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಗುಡ್ಡ ಕುಸಿದ ಪ್ರದೇಶಕ್ಕೆ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಮದೆ ಗ್ರಾ.ಪಂ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭೇಟಿ ನೀಡಿ ಅಗತ್ಯ ಸುರಕ್ಷತಾ ಕ್ರಮಗಳ ಬಗ್ಗೆ ಚರ್ಚಿಸಿದರು. ಗ್ರಾಮಸ್ಥರಿಂದ ಮಾಹಿತಿ ಪಡೆದ ಶಾಸಕರು ಧೈರ್ಯ ತುಂಬಿದರು.
ಬೆಟ್ಟದ ನಿವಾಸಿಗಳಲ್ಲಿ ಆತಂಕ ಜಿಲ್ಲೆಯ ಬೆಟ್ಟಗುಡ್ಡ ಪ್ರದೇಶ ವ್ಯಾಪ್ತಿಯಲ್ಲಿ ನೆಲೆ ಕಂಡುಕೊಂಡಿರುವ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಕಳೆದ ಒಂದು ವಾರದಿಂದ ವಿವಿಧೆಡೆ ಸಂಭವಿಸುತ್ತಿರುವ ಜಲಸ್ಫೋಟದಂತಹ ಘಟನೆಗಳಿಂದ ಕಂಗೆಟ್ಟಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಮಳೆ ಸುರಿಯದಿದ್ದರೂ ಗುಡ್ಡಗಳು ಕುಸಿದು ಜಲ ಪ್ರವಾಹವಾಗುತ್ತಿದೆ. ಪ್ರಕೃತಿ ಸೃಷ್ಟಿಸುತ್ತಿರುವ ಈ ಅವಘಡದ ಕಾರಣ ಇನ್ನೂ ನಿಗೂಢವಾಗಿದೆ.