ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇಂದು ಮುಂಜಾನೆಯಿಂದಲೇ ಮಳೆ ಆರಂಭಗೊಂಡಿದೆ.ಕರಾವಳಿಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು ಅದರಂತೆ ಮಳೆ ಆರಂಭವಾಗಿದೆ.
ಮಂಗಳೂರು ನಗರ ಸೇರಿದಂತೆ ಬಂಟ್ವಾಳ, ಪುತ್ತೂರು,ಸುಳ್ಯ, ಬೆಳ್ತಂಗಡಿ ತಾಲೂಕಿನಲ್ಲೂ ಮಳೆಯಾಗುತ್ತಿದ್ದು, ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಜೀವನದಿಗಳು ತುಂಬುತ್ತಿದ್ದು ನದಿ ಪಾತ್ರದ ಜನ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚಿಸಿದೆ.
ಸಮದ್ರದಲ್ಲೂ ಅಲೆಗಳ ಅಬ್ಬರ ಹೆಚ್ಚಾಗಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹಾಗೂ ಕಡಲ ತೀರದ ಜನ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಮೂಳೂರಿನಲ್ಲಿ ಕಡಲ್ಕೊರೆತ
ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕಾಪು ಪುರಸಭಾ ವ್ಯಾಪ್ತಿಯ ಮೂಳೂರಿನ ತೊಟ್ಟಂ ಸಮೀಪದಲ್ಲಿ ಕಡಲ್ಕೊರೆತ ಉಂಟಾಗಿದ್ದು, ಹಲವು ತೆಂಗಿನ ಮರಗಳು ಸಮುದ್ರ ಸೇರಿವೆ.
ಸುಮಾರು 2 ಕಿಲೋಮೀಟರ್ ಉದ್ದದಲ್ಲಿ ಜನ ವಸತಿ ಪ್ರದೇಶದಲ್ಲಿ ಕಡಲ್ಕೊರೆತವಾಗುತ್ತಿದ್ದು, ಈ ಭಾಗದಲ್ಲಿದ್ದ ಹತ್ತಾರು ತೆಂಗಿನ ಮರಗಳು ಕಡಲ ಒಡಲು ಸೇರಿವೆ. ಪಡುಬಿದ್ರಿಯ ನಡಿಪಟ್ಣ, ಕಾಡಿಪಟ್ಣ, ಕಾಪುವಿನ ಕೈಪುಂಜಾಲು, ಬೀಚ್ ಪ್ರದೇಶ, ಹೆಜಮಾಡಿಯ ಕೋಡಿ, ಎರ್ಮಾಳು ತೆಂಕ, ಬಡಾ ಉಚ್ಚಿದಲ್ಲೂ ಕಡಲ ಅಬ್ಬರ ಹೆಚ್ಚಾಗಿದ್ದು, ಈ ಭಾಗದಲ್ಲೂ ಕಡಲ್ಕೊರೆತ ಭೀತಿ ಉಂಟಾಗಿದೆ.