ಮಡಿಕೇರಿ: ಕೊಡಗಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತಿದೆ. ಹೀಗಾಗಿ ಕುಶಾಲನಗರ ತಾಲೂಕಿನ ದುಬಾರೆಯಲ್ಲಿ ರಿವರ್ ರಾಫ್ಟಿಂಗ್ ಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಮಳೆ ಹೆಚ್ಚಾದ ಕಾರಣ ಸಾಹಸ ಕ್ರೀಡೆಗಳನ್ನು ಕೂಡಾ ಸ್ಥಗಿತಗೊಳಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ರಾಪ್ಟಿಂಗ್ ಬಂದ್ ಮಾಡಲಾಗಿದ್ದು, ಮಳೆ ಪ್ರಮಾಣ ಕಡಿಮೆಯಾದ ಬಳಿಕ ಮತ್ತೆ ರಾಫ್ಟಿಂಗ್ ಆರಂಭವಾಗಲಿದೆ. ಕೊರೋನಾ ಹಿನ್ನೆಲೆಯಲ್ಲಿ ದುಬಾರೆ ಆನೆ ಶಿಬಿರದ ಪ್ರವೇಶಕ್ಕೆ ಈಗಾಗಲೇ ಬ್ರೇಕ್ ಬಿದ್ದಿದೆ. ದುಬಾರೆ ರಿವರ್ ರಾಫ್ಟಿಂಗ್ ಭಾರೀ ಜನಪ್ರಿಯವಾಗಿದ್ದು ಪ್ರವಾಸಿಗರ ನೆಚ್ಚಿನ ತಾಣವಾಗಿದೆ.
ಪ್ರತಿ ದಿನ ಹಲವು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಸಾಹಸ ಕ್ರೀಡೆಗಳಿಗೆ ಹೇಳಿ ಮಾಡಿಸಿದ ತಾಣದಂತಾಗಿರುವ ದುಬಾರೆಯಲ್ಲಿ ಉಳಿದ ದಿನಗಳಂದು ಪ್ರವಾಸಿಗರ ದಂಡೇ ಸೇರಿರುತ್ತದೆ.
ಜಿಲ್ಲೆಯಲ್ಲಿ ಮುಂದುವರಿದ ಮಳೆಯ ಅಬ್ಬರದಿಂದಾಗಿ ಅಲ್ಲಲ್ಲಿ ತಾತ್ಕಾಲಿಕ ಜಲಪಾತಗಳು ನಿರ್ಮಾಣವಾಗಿವೆ. ವಿರಾಜಪೇಟೆ ತಾಲ್ಲೂಕಿನ ಚೆಟ್ಟಳ್ಳಿ ಗ್ರಾಮದ ಬಳಿ ಸೃಷ್ಟಿಯಾಗಿರುವ ಜಲಪಾತ ಕಣ್ಮನ ಸೆಳೆಯುತ್ತಿದೆ.