ಬೆಂಗಳೂರು: 2023ರ ಚುನಾವಣೆಯಲ್ಲಿ ಕನ್ನಡಿಗರಿಂದ, ಕನ್ನಡಿಗರಿಗಾಗಿ, ಕನ್ನಡಿಗರದ್ದೇ ಆದ ಸರಕಾರ ಬರಬೇಕಿದೆ ಎಂದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರತಿಪಾದಿಸಿದರು. ದಾಸರಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಜನತಾಮಿತ್ರ ಅಭಿಯಾನದ ಮೊದಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬಂದೇ ಬರುತ್ತದೆ. ನಾನು ಮುಖ್ಯಮಂತ್ರಿ ಆಗಿಯೇ ಆಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಬಾರಿ ಒಮ್ಮೆ ಅಧಿಕಾರ ಕೊಡಿ. ಪ್ರಾಮಾಣಿಕ ಆಡಳಿತ ಕೊಡುತ್ತೇನೆ. ನಿಮ್ಮ ನಿರೀಕ್ಷೆಗಳನ್ನು ಈಡೇರಿಸಿ ಬಲಿಷ್ಠ, ಸ್ವಚ್ಚ, ಸುಂದರ ಬೆಂಗಳೂರು ನಗರವನ್ನು ನಿರ್ಮಿಸುತ್ತೇನೆ. ದಾಸರಹಳ್ಳಿ ಮಾತ್ರವಲ್ಲ, ಅಕ್ಕಪಕ್ಕದ ಕ್ಷೇತ್ರಗಳು, ಬೆಂಗಳೂರಿನ 28 ವಿಧಾನಸಭೆ ಕ್ಷೇತ್ರಗಳಲ್ಲಿ ಕೂಡ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಚುನಾವಣೆ ಹತ್ತಿರ ಬಂದಾಗ ನಿದ್ದೆಯಿಂದ ಎದ್ದು ಕೂತಿವೆ. ವಿಧಾನಸೌಧ ಮತ್ತು ಬಿಬಿಎಂಪಿಯಲ್ಲಿ ಆಡಳಿತ ನಡೆಸಿವೆ. ಬಿಜೆಪಿಯಂತೂ ಹಿಂದುತ್ವ ಎಂದು ಜನರನ್ನು ದಿಕ್ಕು ತಪ್ಪಿಸುತ್ತಿದೆ. ನಾವು ಹಿಂದೂಗಳೇ. ಹಿಂದುತ್ವವನ್ನು ಬಿಜೆಪಿಗೆ ಗುತ್ತಿಗೆ ಕೊಟ್ಟಿಲ್ಲ. ದೇವಸ್ಥಾನಗಳನ್ನು ಕಟ್ಟಲು ನಮ್ಮ ಪಕ್ಷದ ದಾಸರಹಳ್ಳಿ ಶಾಸಕರು ಕೊಟ್ಟಷ್ಟು ಹಣಕಾಸು ನೆರವನ್ನು ಬಿಜೆಪಿ ಶಾಸಕರು ಕೊಟ್ಟಿಲ್ಲ ಎಂದು ಅವರು ಹೇಳಿದರು.