ಬೆಳ್ತಂಗಡಿ: ಕರಾವಳಿ ಭಾಗದಲ್ಲಿ ಜನರು ಅತೀ ಹೆಚ್ಚು ಮಾತನಾಡುವ ತುಳುಭಾಷೆಯನ್ನು ಉತ್ತೇಜಿಸುವ ಸಲುವಾಗಿ ಮಂಗಳೂರು ಶಾಸಕ ಹರೀಶ್ ಪೂಂಜ ಅವರು ವಿಶಿಷ್ಟ ರೀತಿಯಲ್ಲಿ ಹೆಜ್ಜೆಯಿಟ್ಟಿದ್ದಾರೆ.
ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆ ತುಳುನಾಡು ಭಾಗದಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತಿದ್ದು, ಇಲ್ಲಿನ ಜನರು ಆಡು ಭಾಷೆ ಮತ್ತು ವ್ಯಾವಹಾರಿಕ ಭಾಷೆಯಾಗಿ ಬಳಸುತ್ತಾರೆ. ಆದರೆ ಲಿಪಿಯ ಬಳಕೆ ತೀರಾ ಕಡಿಮೆಯಿದ್ದು, ಕೇವಲ ಬೆರಳೆಣಿಕೆಯ ಜನರು ಮಾತ್ರ ತುಳು ಲಿಪಿ ಬಲ್ಲವರಾಗಿದ್ದಾರೆ.
ಆದರೆ ಇತ್ತೀಚೆಗೆ ತುಳು ಲಿಪಿಯ ಬಳಕೆಯ ಅವಶ್ಯಕತೆಯ ಬಗ್ಗೆ ತುಳುನಾಡಿನ ಯುವಜನರು ಎಚ್ಚೆತ್ತಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಳುನಾಡ್ ಸಂಘಟನೆ ಸೇರಿದಂತೆ ಅನೇಕ ಸಂಘಟನೆಗಳು ತುಳು ಭಾಷೆಯ ಉಳಿವಿಗಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಆ ಪೈಕಿ ತುಳು ಲಿಪಿ ಕಲಿಕಾ ಕಾರ್ಯಕ್ರಮ ಕೂಡ ಒಂದು.
ತುಳು ಭಾಷೆ,ನಾಡು ನುಡಿಗಾಗಿ ಕೆಲಸ ಮಾಡುವ ಸಂಘಟನೆಗಳಿಗೆ ಶಾಸಕ ಹರೀಶ್ ಪೂಂಜ ಈ ಹಿಂದಿನಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿದ್ದರು.ಇದೀಗ ಇದರ ಮುಂದುವರಿದ ಭಾಗವಾಗಿ ತನ್ನ ಬೆಳ್ತಂಗಡಿಯ ಕಚೇರಿಯಲ್ಲಿ ತುಳು ಲಿಪಿಯ ಬೋರ್ಡ್ ನ್ನೇ ಅಳವಡಿಸುವ ಮೂಲಕ ಇತರರು ಹಾಕುವಂತೆ ಪ್ರೇರೇಪಿಸಿದ್ದಾರೆ.
ಇನ್ನೊಂದೆಡೆ ಕರಾವಳಿಯ ಹಲವು ಭಾಗದಲ್ಲಿ ತುಳು ಲಿಪಿಯಲ್ಲೇ ಊರಿನ ಹೆಸರನ್ನು ಹಾಕುವ ಕಾರ್ಯ ಕೂಡ ನಡೆಯುತ್ತಿದ್ದು, ತುಳು ಲಿಪಿ ಕಲಿಕೆಗೆ ಮನ್ನಣೆ ಸಿಗುತ್ತಿರುವ ಹೊತ್ತಲ್ಲೇ ಶಾಸಕರ ಈ ನಿರ್ಧಾರ ಕರಾವಳಿ ಭಾಗದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.