ಮಂಗಳೂರು: ಕಾಂಗ್ರೆಸ್ ಪಕ್ಷ ಮೇಲಿನಿಂದ ಕೆಳಗಿನವರೆಗೂ ಒಂದೇ ಮಾನಸಿಕತೆ ಇರುವ ಪಕ್ಷವಾಗಿದ್ದು, ಒಬ್ಬ ಒಳ್ಳೆಯ ಮನುಷ್ಯನನ್ನೂ ಹೆಕ್ಕಿ ತೆಗೆಯಲು ಸಾಧ್ಯವಿಲ್ಲದಂತಹ ಪಕ್ಷ ಎಂದು ಬೆಳ್ತಂಗಡಿ ಶಾಸಕ ಮತ್ತು ಬಿಜೆಪಿ ಯುವ ಮೋರ್ಛಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಂಜ ಹೇಳಿದ್ದಾರೆ.
ಮೋದಿ ಮೋದಿ ಎನ್ನುವ ಯುವಕರ ಕಪಾಳಕ್ಕೆ ಹೊಡೆಯಬೇಕು ಎಂಬ ಸಚಿವ ಶಿವರಾಜ್ ತಂಗಡಗಿ ಹೇಳಿಕೆಗೆ ಮಂಗಳೂರಿನಲ್ಲಿ ಇಂದು ಪ್ರತಿಕ್ರಿಯಿಸಿದ ಹರೀಶ್ ಪೂಂಜ, ಕಾಂಗ್ರೆಸ್ ನ ಮನೆ ಮಕ್ಕಳ ಚಾಳಿ ಊರಿಗೆಲ್ಲಾ ಎಂಬಂತೆ ಅವರ ಎಲ್ಲಾ ನಾಯಕರಿಗೂ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿ ಮತ್ತು ಮೋದಿಯನ್ನು ಎದುರಿಸಲಾಗದೇ ಅನೇಕ ನಾಯಕರು ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಹೇಳಿರುವ ಶಾಸಕ ಹರೀಶ್ ಪೂಂಜ,ಈ ದೇಶದ ಇತಿಹಾಸವನ್ನು ಸಚಿವ ತಂಗಡಗಿ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ಕಾಂಗ್ರೆಸ್ ನ ಹತಾಶೆಯ ಭಾವನೆ ರಾಜ್ಯದಲ್ಲಿ ವ್ಯಕ್ತವಾಗಿದ್ದು, ಕಾಂಗ್ರೆಸ್ ದ್ವೇಷ, ಅಸಹಿಷ್ಣುತೆಯ ಮಾತುಗಳನ್ನಾಡಿರುವುದು ಇದು ಮೊದಲೇನಲ್ಲ ಎಂದು ಶಾಸಕ ಪೂಂಜ ಟೀಕಿಸಿದ್ದಾರೆ.