ಗುಜರಾತ್ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಕಾಂಗ್ರೆಸ್ಗೆ ತೀವ್ರ ಹಿನ್ನಡೆಯಾಗಿದೆ. ಈಗಾಗಲೇ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದ ಹಾರ್ದಿಕ್ ಪಟೇಲ್ ಈಗ ಸಂಪೂರ್ಣವಾಗಿ ಕಾಂಗ್ರೆಸ್ ಹೊಸ್ತಿಲು ದಾಟಿದ್ದಾರೆ.
“ನಾನು ಕಾಂಗ್ರೆಸ್ ಪಕ್ಷ ಮತ್ತು ಹುದ್ದೆಗೆ ರಾಜೀನಾಮೆ ಸಲ್ಲಿಸುವ ಧೈರ್ಯವನ್ನು ಒಗ್ಗೂಡಿಸಿಕೊಳ್ಳುತ್ತಿದ್ದೇನೆ. ನನ್ನ ನಿರ್ಧಾರವನ್ನು ನನ್ನ ಸಹೋದ್ಯೋಗಿಗಳು ಮತ್ತು ಗುಜರಾತ್ನ ಜನರು ಸ್ವಾಗತಿಸಲಿದ್ದಾರೆ ಎಂದು ನನಗೆ ಖಾತರಿ ಇದೆ. ಈ ಹೆಜ್ಜೆಯೊಂದಿಗೆ ನಾನು ಭವಿಷ್ಯದಲ್ಲಿ ಗುಜರಾತ್ಗಾಗಿ ನಿಜಕ್ಕೂ ಸಕಾರಾತ್ಮಕವಾಗಿ ಕೆಲಸ ಮಾಡಲು ಸಾಧ್ಯವಾಗಲಿದೆ ಎಂದು ನಂಬಿದ್ದೇನೆ” ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ರಾಜೀನಾಮೆ ಪತ್ರವನ್ನು ಟ್ವಿಟ್ಟರ್ನಲ್ಲಿ ಹಾರ್ದಿಕ್ ಪಟೇಲ್ ಹಂಚಿಕೊಂಡಿದ್ದಾರೆ.
ಪಾಟಿದಾರ್ ಸಮುದಾಯದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹಾರ್ದಿಕ್ ಪಟೇಲ್, 2017ರ ಗುಜರಾತ್ ವಿಧಾನಸಭೆ ಚುನಾವಣೆಗೂ ಮುನ್ನ ನಾಯಕರಾಗಿ ಹೊರಹೊಮ್ಮಿದ್ದರು. 2019ರ ಲೋಕಸಭಾ ಚುನಾವಣೆಗೂ ಸ್ವಲ್ಪ ಮುಂಚೆ ಅವರು ಕಾಂಗ್ರೆಸ್ ಸೇರಿಕೊಂಡಿದ್ದರು. ಗುಜರಾತ್ ಕಾಂಗ್ರೆಸ್ ರಾಜ್ಯ ಘಟಕದಲ್ಲಿ ಆಂತರಿಕ ಜಗಳದ ಬಗ್ಗೆ ಹಾರ್ದಿಕ್ ಪಟೇಲ್ ಅವರು ಕೆಲವು ದಿನಗಳಿಂದ ಆರೋಪ ಮಾಡುತ್ತಿದ್ದರು. ತಮಗೆ ಪಕ್ಷದಲ್ಲಿ ಹುದ್ದೆ ಇದ್ದರೂ ಅಧಿಕಾರವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ಸೋನಿಯಾ ಗಾಂಧಿ ಅವರಿಗೆ ಸುದೀರ್ಘ ರಾಜೀನಾಮೆ ಪತ್ರ ಬರೆದಿರುವ ಹಾರ್ದಿಕ್ ಪಟೇಲ್, ರಾಹುಲ್ ಗಾಂಧಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಗಂಭೀರ ಸನ್ನಿವೇಶಗಳಲ್ಲಿ ಭಾರತದಲ್ಲಿ ಇರುವುದು ಅಗತ್ಯವಾಗಿರುವಾಗ ನಮ್ಮ ನಾಯಕ ವಿದೇಶದಲ್ಲಿ ಇರುತ್ತಾರೆ” ಎಂದು ಟೀಕಿಸಿದ್ದಾರೆ. ರಾಹುಲ್ ಗಾಂಧಿ ಅವರ ಗುಜರಾತ್ ಭೇಟಿಯ ಬಳಿಕ ಇಬ್ಬರ ಭೇಟಿ ಫಲಪ್ರದವಾಗಿಲ್ಲ. “ನಾನು ಹಿರಿಯ ನಾಯಕರನ್ನು ಭೇಟಿ ಮಾಡಿದಾಗ, ಅವರು ತಮ್ಮ ಮೊಬೈಲ್ ಫೋನ್ಗಳಿಂದ ಮತ್ತು ಇತರೆ ಸಮಸ್ಯೆಗಳಿಂದ ಅಡಚಣೆಗೆ ಒಳಗಾದವರಂತೆ ಕಂಡುಬರುತ್ತಾರೆ. ಗುಜರಾತ್ಗೆ ಸಂಬಂಧಿಸಿದ ವಿಷಯಗಳನ್ನು ಆಲಿಸಲು ಅವರು ವಿರೋಧಿಸುತ್ತಾರೆ” ಎಂದು ಯಾರನ್ನೂ ಹೆಸರಿಸದೆ ಅವರು ವಾಗ್ದಾಳಿ ನಡೆಸಿದ್ದರು.