ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ 8ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಅಂಗವಾಗಿ ಕೈಮಗ್ಗ ಮತ್ತು ಜವಳಿ ಇಲಾಖೆಯು ಇಲ್ಲಿನ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಆಯೋಜಿಸಿರುವ ಮೂರು ದಿನಗಳ ‘ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಇಂದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೈಮಗ್ಗ ಅಂದ್ರೆ ಸ್ವಾವಲಂಬನೆ ಸಂಕೇತ. ಇದು ಸ್ವತಂತ್ರ ಹೋರಾಟದಲ್ಲಿ ಬಹಳ ಮುಖ್ಯ ಪಾತ್ರ ವಹಿಸಿದೆ ಹಾಗೂ ಕೈಮಗ್ಗದ ಚರಕದ ಬಗ್ಗೆ ಮಹತ್ವವನ್ನ ತಿಳಿಸಿದ ಮಹಾತ್ಮ ಗಾಂಧಿಯವರು ನಮ್ಮ ಬಟ್ಟೆಯನ್ನ ನಾವೇ ತಯಾರು ಮಾಡುಬೇಕೆಂದು ಕರೆ ಕೊಟ್ಟವರು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಆತ್ಮ ನಿರ್ಭರ್ ಭಾರತ್ ಎಂದು ಕರೆ ಕೊಟ್ಟಿತ್ತು ಇದರಲ್ಲಿ ಕೈಮಗ್ಗ ಒಂದು ಕೂಡ, ಇದು ನೇಕಾರರು ಕೂಲಿಕಾರರು ಲಾಭಗಳಿಸುವ ಉದ್ದೇಶಕ್ಕೆ ಇಂದು ಮೇಳವನ್ನ ಆಯೋಜಿಸಲಾಗಿದೆ. ನೇಕಾರರ ಮಕ್ಕಳಿಗೆ ವಿದ್ಯಾನಿಧಿಯನ್ನ ಕೂಡ ಕೊಡ್ತಾ ಇದ್ದೇವೆ ಹಾಗೂ ಅನೇಕ ಯೋಜನೆಗಳನ್ನ ಕೈಮಗ್ಗಕ್ಕೆ ಮೀಸಲಿಟ್ಟಿದ್ದೇವೆ ಈ ಕ್ಷೇತ್ರ ಅತಿ ಹೆಚ್ಚು ಉದ್ಯೋಗ ಕೊಡುತ್ತದೆ ” ಎಂದರು.
ಇಂದಿನಿಂದ ಆ.7 ರವರೆಗೆ ನಡೆಯಲಿರುವ ಕೈಮಗ್ಗ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ವಿವಿಧ ಸಹಕಾರ ಸಂಘ-ಸಂಸ್ಥೆಗಳು ಭಾಗವಹಿಸಿದ್ದು, ಮಳಿಗೆಗಳು ಬೆಳಗ್ಗೆ 11ರಿಂದ ಸಂಜೆ 7.30ರವರೆಗೆ ತೆರೆದಿರಲಿವೆ. ಅಲ್ಲದೆ, ಆ.7ರಂದು ಬೆಳಗ್ಗೆ 11.30ಕ್ಕೆ 8ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಾಗೂ ನೇಕಾರರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾನ್ಯ ಕೈಮಗ್ಗ ಮತ್ತು ಜವಳಿ, ಸಕ್ಕರೆ ಸಚಿವ ಶ್ರೀ ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ ಅವರು ಉದ್ಘಾಟಿಸಲಿದ್ದಾರೆ.
ಕೈಮಗ್ಗ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನದಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ (ಕೆ.ಎಚ್.ಡಿ.ಸಿ.)ದ ರೇಷ್ಮೆ ಸೀರೆಗಳು, ಕಾಟನ್ ಬೆಡ್ ಶೀಟ್, ಟವೆಲ್, ಲುಂಗಿ, ತುಮಕೂರು, ಚಿತ್ರದುರ್ಗ, ಹಾಸನ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರದ ರೇಷ್ಮೆ ಸೀರೆಗಳು, ದಾವಣಗೆರೆಯ ಟವೆಲ್, ಲುಂಗಿ, ಕರವಸ್ತ್ರ, ಬೆಡ್ಶೀಟ್; ಶಿವಮೊಗ್ಗದ ಕಾಟನ್ ಶರ್ಟ್, ಕಾಟನ್ ಕೋಟ್, ಕುರ್ತಾ, ಮಕ್ಕಳ ಉಡುಗೆ, ಸೀರೆ; ಚಿಕ್ಕಮಗಳೂರು, ಹಾವೇರಿಯ ಕರ್ಚೀಫ್ ಸಹಿತ ಇತರ ಉತ್ಪನ್ನಗಳು ಇವೆ.
ಅಲ್ಲದೆ, ಉಡುಪಿ ಸೀರೆ, ಬೀದರ್ ನ ರಗ್ಗು, ಕಲಬುರಗಿಯ ಶಾಲು, ಕಂಬಳಿ, ಬಳ್ಳಾರಿಯ ಕಸೂತಿ ಉತ್ಪನ್ನಗಳು, ಧಾರವಾಡದ ಜಮಖಾನ, ಬೆಳಗಾವಿಯ ಸೀರೆ, ಧೋತಿ, ದುಪಟ್ಟಾ, ನ್ಯಾಪ್ಕಿನ್ ಗದಗದ ಪಟ್ಟೆದಂಚು ಸೀರೆ, ಗಾಡಿಧಡಿ ಕಾಟನ್ ಸೀರೆ, ಗೋಮಿಧಡಿ ಸೀರೆ, ಚಿಕ್ಕಿಫರಾಸ್ ಕಾಟನ್ ಸೀರೆ; ವಿಜಯಪುರದ ಜಾಕೆಟ್, ಹಾಗೂ ಬಾಗಲಕೋಟೆಯ ಗುಳೇದಗುಡ್ಡ ಖಣ ಬಟ್ಟೆ, ಖಣ ನೋಟ್ ಬುಕ್, ಖಣ ಶಾಲು, ಇಲಕಲ್ ಸೀರೆಗಳು ದೊರೆಯುತ್ತವೆ.