ಢಾಕಾ: ಬಾಂಗ್ಲಾದೇಶದ ಸರ್ಕಾರದಿಂದ ಇಸ್ಕಾನ್ ಮೇಲಿನ ಪ್ರಹಾರ ಮುಂದುವರೆದಿದ್ದು, ಇದೀಗ ಧಾರ್ಮಿಕ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಇಸ್ಕಾನ್ನ 50ಕ್ಕೂ ಹೆಚ್ಚು ಸದಸ್ಯರು ಭಾರತಕ್ಕೆ ತೆರಳದಂತೆ ತಡೆಹಿಡಿದಿದೆ ಎಂದು ವರದಿಯಾಗಿದೆ.
ಸುಮಾರು 54 ಇಸ್ಕಾನ್ ಸದಸ್ಯರು ಶನಿವಾರ ತಡರಾತ್ರಿ ಮತ್ತು ಭಾನುವಾರ ಬೆಳಗ್ಗೆ ಬೆನಪೋಲ್ ಗಡಿಭಾಗಕ್ಕೆ ಆಗಮಿಸಿದ್ದು, ಅವರ ಪ್ರಯಾಣಕ್ಕೆ ಬೇಕಾದ ಪಾಸ್ಪೋರ್ಟ್, ವೀಸಾ ಸೇರಿ ಪೂರಕವಾದ ದಾಖಲೆಗಳಿದ್ದರೂ ಗಡಿ ಅಧಿಕಾರಿಗಳು ಭಾರತಕ್ಕೆ ತೆರಳಲು ಅನುಮತಿ ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ.
ಗಂಟೆಗಟ್ಟಲೇ ಇಸ್ಕಾನ್ ಸದಸ್ಯರು ಗಡಿಭಾಗದಲ್ಲಿ ಕಾದು ಕುಳಿತರು ಬಿಡಲಿಲ್ಲ. ಬಾಂಗ್ಲಾದೇಶವು ಇಸ್ಕಾನ್ ಸಂಘಟನೆಯನ್ನ ಗುರಿಯಾಗಿಸಿಕೊಂಡು ಪ್ರಮುಖರನ್ನ ಬಂಧಿಸುವುದು, ಗಡಿ ದಾಟದಂತೆ ತಡೆಹಿಡಿಯುವ ಕೆಲಸ ಮಾಡುತ್ತಿದೆ ಎಂದು ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಈ ಕುರಿತಂತೆ ಪ್ರತಿಕ್ರಿಯಿಸಿರುವ ಗಡಿ ಪೊಲೀಸರು, ‘ಬಾಂಗ್ಲಾ ಸರ್ಕಾರದಿಂದ ಎಲ್ಲ ಅಗತ್ಯ ದಾಖಲೆವಿದ್ದರೂ, ಗಡಿ ದಾಟಲು ಅನುಮತಿ ನೀಡಲು ಹಿಂದೇಟು ಹಾಕುತ್ತಿದೆ. ಸರ್ಕಾರದಿಂದ ಅನುಮೋದನೆ ಪಡೆಯದೇ ಮುಂದುವರಿಯಲು ಸಾಧ್ಯವಿಲ್ಲ,’ ಎಂದಿದ್ದಾರೆ ಎಂದು ವರದಿಯಾಗಿದೆ.